ಮಂಗಳೂರು: ಕೊರೋನಾ ಸೋಂಕು ವ್ಯಾಪಕವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ಡೌನ್ ಹೇರಿರುವ ರಾಜ್ಯ ಸರ್ಕಾರ ಅಂತ್ಯಸಂಸ್ಕಾರಗಳಿಗೆ 5ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂಬ ಸೂಚನೆಗಳನ್ನು ನೀಡಿದ್ದು, ಇದರ ಪರಿಣಾಮ ಸಾವನ್ನಪ್ಪಿದ ಆತ್ಮೀಯರು ಹಾಗೂ ಕುಟುಂಬ ಸದಸ್ಯರ ಅಂತಿಮ ದರ್ಶನ ಪಡೆಯುವ ಸಲುವಾಗಿ ಮಂಗಳೂರು ಹಾಗೂ ಉಡುಪಿಯಲ್ಲಿನ ಜನರು ಅಂತ್ಯಸಂಸ್ಕಾರದ ನೇರಪ್ರಸಾರದ ಮೊರೆ ಹೋಗಿದ್ದಾರೆ.
ಮಧ್ಯಮ ವರ್ಗದ ಜನರು ಫೇಸ್ ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣದ ಲೈವ್ ಸ್ಟ್ರೀಮಿಂಗ್ ಬಳಕೆ ಮಾಡುತ್ತಿದ್ದರೆ, ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಜನರು ಸ್ಥಳೀಯ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಅಂತ್ಯಕ್ರಿಯೆಗಳನ್ನು ಲೈವ್-ಸ್ಟ್ರೀಮಿಂಗ್ ಮಾಡುತ್ತಿದ್ದಾರೆ.
ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿ ಮತ್ತು ಛಾಯಾಗ್ರಾಹಕ ನೈಝಿಲ್ ರೊಡ್ರಿಗಸ್ ಮಾತನಾಡಿ, ಕಳೆದ ತಿಂಗಳು ಕಿನ್ನಿಗೋಳಿಯಲ್ಲಿ ಮೂರು ಮಂದಿಯ ಅಂತ್ಯಸಂಸ್ಕಾರವನ್ನು ಲೈವ್ ಸ್ಟ್ರೀಮಿಂಗ್ ಮಾಡಲಾಗಿತ್ತು. ಕೆಲವರು ತಮ್ಮ ಮೊಬೈಲ್ ಫೋನ್ ಮೂಲಕವೇ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದು, ಕೆಲವರು ವಿಡಿಯೋ ಗ್ರಾಫರ್ ಗಳನ್ನು ಕರೆಸುತ್ತಿದ್ದಾರೆಂದು ಹೇಳಿದ್ದಾರೆ.
ಲಾಕ್ಡೌನ್ ನಿಂದ ಛಾಯಾಗ್ರಾಹಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಛಾಯಾಗ್ರಾಹಕರಿಗೆ ಬೇಡಿಕೆ ಹೆಚ್ಚುವ ಕಾಲ ಬಂದಿದೆ. ಮೊಬೈಲ್ ಫೋನ್ ಮೂಲಕ ಒಂದು ಅಂತ್ಯಸಂಸ್ಕಾರವನ್ನು ಲೈವ್ ಸ್ಟ್ರೀಮಿಂಗ್ ಮಾಡಿದರೆ ಛಾಯಾಗ್ರಾಹಕರಿಗೆ ರೂ.1500 ನೀಡಲಾಗುತ್ತಿದೆ. ವಿಡಿಯೋ ಕ್ಯಾಮೆರಾ ಬಳಸಿದರೆ, ಇದರ ಜೊತೆಗೆ ರೂ.1000 ಹೆಚ್ಚಾಗಿ ನೀಡಲಾಗುತ್ತಿದೆ. ಇನ್ನು ಸ್ಥಳೀಯ ವಾಹಿನಿಗಳು ಸೇವೆ ನೀಡಲು ರೂ.20,000 ಪಡೆಯುತ್ತಿರುವುದಾಗಿ ತಿಳಿದುಬಂದಿದೆ.
ವೃತ್ತಿಪರ ಛಾಯಾಗ್ರಾಹಕರಾಗಿರುವ ಪ್ರಕಾಶ್ ಎಂಬುವವರು ಮಾತನಾಡಿ, ಕ್ರಿಶ್ಚಿಯನ್ ಸಮುದಾಯದಲ್ಲಿ ಈ ಟ್ರೆಂಡ್ ಹೆಚ್ಚಾಗಿದೆ. ಕೊರೋನಾ ಎರಡೇ ಅಲೆ ವೇಳೆ ಈ ಟ್ರೆಂಡ್ ಹೆಚ್ಚಾಗಿದೆ. ವಿದೇಶಗಳಲ್ಲಿರುವ ಕುಟುಂಬಸ್ಥರೂ ಕೂಡ ಲೈವ್ ಸ್ಟ್ರೀಮಿಂಗ್ ಮೂಲಕ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವಂತಾಗಿದೆ. ಕಡಿಮೆ ವೆಚ್ಚ ಹಿನ್ನೆಲೆಯಲ್ಲಿ ಲೈವ್ ಸ್ಟ್ರೀಮಿಂಗ್'ಗೆ ಜನರು ಬೇಗ ಒಪ್ಪಿಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ.