ರಾಜ್ಯ

ಬೆಂಗಳೂರು-ಮೈಸೂರು ನಡುವಿನ 10 ಪಥದ ರಾಷ್ಟ್ರೀಯ ಹೆದ್ದಾರಿ ಕೆಲಸಕ್ಕೆ ಕೋವಿಡ್-19 ನಿಂದ ಹಿನ್ನಡೆ!

Nagaraja AB

ಬೆಂಗಳೂರು: ಕೋವಿಡ್ 19 ಎರಡನೇ ಅಲೆಯಿಂದಾಗಿ ಈ ಬಾರಿಯೂ ಬೆಂಗಳೂರು-ಮೈಸೂರು ನಡುವಿನ ಹತ್ತು ಪಥದ ಹೆದ್ದಾರಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಮತ್ತೊಂದು ಗಡುವನ್ನು ಮೀರುತ್ತಿದೆ.

ಅಂದಾಜು 7,400 ಕೋಟಿ ರೂ. ವೆಚ್ಚದಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, 9 ದೊಡ್ಡ ಸೇತುವೆಗಳು, 44 ಕಿರು ಸೇತುವೆಗಳು, ನಾಲ್ಕು ರಸ್ತೆ ಮೇಲ್ಸುತುವೆಯನ್ನು ಇದು ಒಳಗೊಂಡಿದೆ. ಬೆಂಗಳೂರಿನಿಂದ ಮದ್ದೂರಿನ ನಿಡಘಟ್ಟದವರೆಗೂ (56.2 ಕಿ.ಮೀ) ಮತ್ತು ನಿಡಘಟ್ಟದಿಂದ ಮೈಸೂರಿನವರೆಗೂ (60 ಕಿ.ಮೀ)  ಎರಡು ಹಂತಗಳಲ್ಲಿ ಯೋಜನೆಯನ್ನು ವಿಭಜಿಸಲಾಗಿದೆ.ಅಲ್ಲದೇ, ಬಿಡದಿ, ರಾಮನಗರ, ಚೆನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಬೈಪಾಸ್ ಕೂಡಾ ಇರಲಿದೆ.

ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ಹತ್ತು ಪಥದ ರಾಷ್ಟ್ರೀಯ ಹೆದ್ದಾರಿಯಾಗಿ (ಎನ್ ಹೆಚ್ -275) ವಿಸ್ತರಿಸುವುದಾಗಿ ಕೇಂದ್ರ ಭೂ ಸಾರಿಗೆ ಸಚಿವಾಲಯ 2014 ಮಾರ್ಚ್ ತಿಂಗಳಲ್ಲಿ ಪ್ರಕಟಿಸಿತ್ತು. ಇದು ಬೆಂಗಳೂರಿನ ನೈಸ್ ರಸ್ತೆ ಪ್ರವೇಶದಿಂದ ಮೈಸೂರಿನ ರಿಂಗ್ ರೋಡ್ ಜಂಕ್ಷನ್ ವರೆಗೂ 117 ಕಿ.ಮೀ ದೂರದವರೆಗೂ ಸೇರಿಕೊಂಡಿದೆ.

ಈ ಯೋಜನೆ 2018ರಲ್ಲಿ ಪ್ರಾರಂಭವಾಗಿ 30 ತಿಂಗಳೊಳಗೆ ಅಂದರೆ 2020ರಲ್ಲಿ ಮುಗಿಯಬೇಕಾಗಿತ್ತು. ಆದರೆ, ಧೀರ್ಘ ವಿಳಂಬದ ನಂತರ 2019ರಲ್ಲಿ ಕೆಲಸವನ್ನು ಆರಂಭಿಸಲಾಯಿತು. ಭೂ ಸ್ವಾಧೀನ, ಸಲಕರಣೆಗಳ ಸ್ಥಳಾಂತರ, ಕಾನೂನು ಅಂಶಗಳು ಸೇರಿದಂತೆ ಅನೇಕ ಕಾರಣಗಳಿಂದಾಗಿ ಗಡುವನ್ನು 2021ಕ್ಕೆ ನಿಗದಿಪಡಿಸಲಾಯಿತು.

ಕಳೆದ ವರ್ಷ ಲಾಕ್ ಡೌನ್  ಹಾಗೂ ಉತ್ತರ ಭಾರತ ಮೂಲದ ಅನೇಕ ಕೆಲಸಗಾರರು ತಮ್ಮೂರಿಗೆ ಹೋಗಿದ್ದರಿಂದ ಕೆಲಸಕ್ಕೆ ತೀವ್ರ ಅಡ್ಡಿಯುಂಟಾಯಿತು. ಈ ವರ್ಷ ಕೂಡಾ ಕೆಲಸ ಮುಂದುವರೆದಿದ್ದರೂ, ಕೆಲಸಗಾರರಲ್ಲಿ ಸೋಂಕು ಹಿನ್ನೆಲೆಯಲ್ಲಿ ಮಂದಗತಿಯಲ್ಲಿ ಕೆಲಸ ಸಾಗುತ್ತಿದೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ  ಎನ್ ಹೆಚ್ ಎಐ ಪ್ರಾಜೆಕ್ಟ್ ಡವಲಪ್ ಮೆಂಟ್ ಅಫೀಸರ್, ಶ್ರೀಧರ್, ಕೆಲಸ ನಡೆಯುತ್ತಿದೆ. ಆದರೆ, ನಿಧಾನಗತಿಯಲ್ಲಿ ಸಾಗುತ್ತಿದೆ. 8 ಸಾವಿರ ಕೆಲಸಗಾರರ ಪೈಕಿಯಲ್ಲಿ 200 ಮಂದಿಗೆ ಕೋವಿಡ್-19 ಸೋಂಕು ತಗುಲಿದೆ. ಕೆಲವರಿಗೆ ಮನೆಯಲ್ಲಿಯೇ ಐಸೋಲೇಷನ್ ಆಗಲು ಸಲಹೆ ನೀಡಲಾಗಿದೆ. ಮತ್ತೆ ಕೆಲವರು ತಮ್ಮೂರಿಗೆ ತೆರಳಿದ್ದಾರೆ ಎಂದರು.

 ಕೆಲವು ಸಣ್ಣ ಪ್ರದೇಶಗಳನ್ನು ಹೊರತುಪಡಿಸಿ ಅಗತ್ಯವಿರುವ ಶೇ. 98 ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ.ಆದರೆ, ಕಾರ್ಮಿಕರ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದರು. ಮಾರ್ಚ್ 2022ರೊಳಗೆ ಮೊದಲ ಪ್ಯಾಕೇಜ್ ಪೂರ್ಣಗೊಳ್ಳಬೇಕಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

SCROLL FOR NEXT