ರಾಜ್ಯ

ಕೊರೋನಾ ಎಫೆಕ್ಟ್: ಶೇ.30ರಷ್ಟು ಮಕ್ಕಳು ಕಲಿಕೆಯಿಂದ ವಂಚಿತ; ಡಿಎಸ್‍ಇಆರ್‌ಟಿ ಸಮೀಕ್ಷೆಯಲ್ಲಿ ಬಹಿರಂಗ

Manjula VN

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ನಿಂದ ಶೇ 30ರಷ್ಟು ಮಕ್ಕಳು ಕಲಿಕೆಯಿಂದ ವಂಚಿತರಾಗಿದ್ದಾರೆಂಬ ಮಾಹಿತಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ (ಡಿಎಸ್‍ಇಆರ್‌ಟಿ) ಕೈಗೊಂಡ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್ ಅವರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಡೆಸಿದ ಅಧ್ಯಯನದಲ್ಲಿ ಶಾಲೆಗಳು ನಡೆಯದ ಕಾರಣ ಶೇ.30ರಷ್ಟು ಮಕ್ಕಳು ಕಲಿಕೆಯಿಂದ ಹೊರಗುಳಿದು ಶೈಕ್ಷಣಿಕ ಚಟುವಟಿಕೆಗಳಿಂದ ಹೊರಗುಳಿದಿದ್ದಾರೆ ಎಂಬ ಅಂಶವು ಬಹಿರಂಗಗೊಂಡಿದೆ. ಈ ಅಧ್ಯಯನ ವರದಿಯ ಬೆಳಕಿನಲ್ಲಿ ನಾವು ಈ ವರ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಹೆಚ್ಚಿನ ರೀತಿಯ ಗಮನಹರಿಸುವ ಸವಾಲು ನಮ್ಮ ಮುಂದಿದೆ. ಸರ್ಕಾರಕ್ಕೆ ಶಾಲೆಗಳನ್ನು ತೆರೆಯಬೇಕೆಂಬ ಉತ್ಸುಕತೆ, ತರಗತಿ ಕಲಿಕೆ ಮುಖ್ಯವೆನ್ನುವುದು ಸಾಮಾನ್ಯ ಅಭಿಪ್ರಾಯವಾಗಿದ್ದರೂ ಹಲವಾರು ಅಂಶಗಳನ್ನು ಗಮನಿಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ  ಡಾ.ದೇವಿಶೆಟ್ಟಿ ಅವರು ಸಲ್ಲಿಸಲಿರುವ ವರದಿಯನ್ನು ಪರಿಪೂರ್ಣವಾಗಿ ಗಮನಿಸಿ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 

ಡಿಎಸ್‍ಇಆರ್‌ಟಿ ಸಂಸ್ಥೆಯು ಶಿಕ್ಷಣ ಸಂಶೋಧನೆಯಲ್ಲಿ ಪ್ರಧಾನವಾದ  ಜವಾಬ್ದಾರಿ ಹೊಂದಿದ್ದು, ಈ ಸ್ವಾಯತ್ತ ಸಂಸ್ಥೆ  ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು  ಸಂಶೋಧನಾ ವಿದ್ವಾಂಸರ ಸೇವೆಯನ್ನು ಪಡೆಯಲು ಆಲೋಚಿಸಲಾಗಿದೆ. ಗುಣಾತ್ಮಕ ಶಿಕ್ಷಣದ ಪರಿಕಲ್ಪನೆ ಸಾಕಾರವಾಗಬೇಕಾದಲ್ಲಿ ತರಬೇತಿ ಪ್ರಕ್ರಿಯೆ ವಸ್ತುನಿಷ್ಠವಾಗಬೇಕಿದೆ. ತರಬೇತಿ ಮೌಲ್ಯಮಾಪನ ವ್ಯವಸ್ಥೆ ಬಲಗೊಳ್ಳಬೇಕಿದೆ. ಶಿಕ್ಷಣ ಗುಣಮಟ್ಟ ಸುಧಾರಣೆಯ ಹಿನ್ನೆಲೆಯಲ್ಲಿ ಈ ತರಬೇತಿಯ ಫಲಿತಾಂಶ ಶಾಲಾ ತರಗತಿಯಲ್ಲಿ  ಪ್ರತಿಫಲನಗೊಂಡು  ನಮ್ಮ ಮಕ್ಕಳು ಅದರ ಪ್ರಯೋಜನವನ್ನು ಪಡೆಯುವಂತಾಗಬೇಕು. ಈ ತರಬೇತಿಯ ಅನುಪಾಲನಾ ವ್ಯವಸ್ಥೆ ಮೇಲಿಂದ ಮೇಲೆ ನಡೆಯುವಂತಹ ವ್ಯವಸ್ಥೆ ರೂಪುಗೊಳ್ಳಲು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.

ಪ್ರಸ್ತುತ ವ್ಯವಸ್ಥೆಯಲ್ಲಿ ತರಬೇತಿಗಳಷ್ಟೇ ನಡೆಯುತ್ತಿವೆ. ಸಂಶೋಧನೆಗಳು ಅಷ್ಟಾಗಿ ಕಂಡುಬರುತ್ತಿಲ್ಲ. ಶಿಕ್ಷಣದ ಗುಣಮಟ್ಟ ಸುಧಾರಣೆಗೆ ತರಬೇತಿಗಳಷ್ಟೇ ಸಾಕಾಗದು. ಬದಲಾದ ಕಾಲಮಾನಕ್ಕನುಗುಣವಾಗಿ ನಮ್ಮ ಸಂಶೋಧನಾ ಸಂಸ್ಥೆಗಳೂ ಬದಲಾಗಬೇಕಿದೆ. ಹೊಸ ಶಿಕ್ಷಣ ನೀತಿ ಜಾರಿಗೊಳಿಸುತ್ತಿರುವ ಈ ಸಂದರ್ಭದಲ್ಲಿ ಇಂತಹ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯನ್ನು ಪುನರ್‍ರೂಪಿಸಬೇಕಾದ ಅಗತ್ಯವಿದ್ದು, ಈ ಕುರಿತು ಅಗತ್ಯ ಕ್ರಿಯಾ ಯೋಜನೆ ರೂಪಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

SCROLL FOR NEXT