ರಾಜ್ಯ

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನೂ ಜೈಲುವಾಸ ಅನುಭವಿಸಿದ್ದೆ: ಮುಖ್ಯಮಂತ್ರಿ ಯಡಿಯೂರಪ್ಪ

Sumana Upadhyaya

ಬೆಂಗಳೂರು: 46 ವರ್ಷಗಳ ಹಿಂದೆ ಇದೇ ದಿನ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಯಾವುದೇ ಕಾರಣ ಇಲ್ಲದೆ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿ ದೇಶದ ಜನರು ಕಷ್ಟಪಡುವಂತೆ ಮಾಡಿದ್ದರು. ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ಇಂದಿರಾ ಗಾಂಧಿಯವರು ತೆಗೆದುಕೊಂಡ ತೀರ್ಮಾನಗಳಿಂದ ದೇಶದ ಅನೇಕ ನಾಯಕರು ಜೈಲುವಾಸವನ್ನು ಅನುಭವಿಸಬೇಕಾಯಿತು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೆನಪು ಮಾಡಿಕೊಂಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿದ ಅವರು, ಸಂವಿಧಾನದತ್ತವಾದ ವಾಕ್ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯ, ಸೃಜನಶೀಲತೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. ಮಾಧ್ಯಮಗಳ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಅಮಾಯಕರನ್ನು ಬಂಧಿಸಲಾಯಿತು, ನಾಗರಿಕರ ಹಕ್ಕುಗಳಿಗೆ ಬೆಲೆ ಇಲ್ಲದಂತಾಯಿತು. ಮಾಧ್ಯಮಗಳು ಇದನ್ನು ವಿರೋಧಿಸಿದ್ದವು. ತುರ್ತುಪರಿಸ್ಥಿತಿ ವಿರೋಧಿಸಿ ಜೈಲು ಸೇರಿದ್ದ ನಟಿ ಸ್ನೇಹಲತಾ ತಮ್ಮ ಪ್ರಾಣವನ್ನೇ ಕಳೆದುಕೊಂಡರು ಎಂದು ಯಡಿಯೂರಪ್ಪ ಇಂದಿರಾ ಗಾಂಧಿಯವರು ಹೇರಿದ್ದ ಕ್ರಮವನ್ನು ವಿರೋಧಿಸಿದ್ದಾರೆ.

ಆ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವ ಕಾರ್ಯಕರ್ತರು ತಮ್ಮ ಮನೆ-ಮಠ, ಕುಟುಂಬವನ್ನು ತೊರೆದು ಮನೆಮನೆಗಳಿಗೆ ಹೋಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೆವು. ನಾನು ಸೇರಿದಂತೆ ಅನೇಕ ಕಾರ್ಯಕರ್ತರು ಶಿವಮೊಗ್ಗ, ಸಾಗರ, ಬಳ್ಳಾರಿಗಳಲ್ಲಿ ಜೈಲುವಾಸ ಅನುಭವಿಸಬೇಕಾಗಿ ಬಂತು. ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಆಡ್ವಾಣಿ, ಜಯಪ್ರಕಾಶ್ ನಾರಾಯಣ್, ಜಾರ್ಜ್ ಫೆರ್ನಾಂಡಿಸ್,ದೇವೇಗೌಡರನ್ನು ಬಂಧಿಸಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಇರಿಸಿದ್ದರು ಎಂದು ಯಡಿಯೂರಪ್ಪ ಹೇಳಿದರು.

SCROLL FOR NEXT