ರಾಜ್ಯ

ಹಾಸನ: ಒಂದೇ ತಿಂಗಳಲ್ಲಿ ವಿವಾಹಿತ ಸೋದರಿಯರು ಆತ್ಮಹತ್ಯೆಗೆ ಶರಣು, ವರದಕ್ಷಿಣೆಗಾಗಿ ಕೊಲೆ ಶಂಕೆ

Raghavendra Adiga

ಹಾಸನ/ಶಿವಮೊಗ್ಗ: ಒಂದೇ ತಿಂಗಳಲ್ಲಿ ವಿವಾಹಿತ ಸೋದರಿಯರಿಬ್ಬರೂ ತಮ್ಮ ತಮ್ಮ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಸಕಲೇಶಪುರದಲ್ಲಿ ನಡೆದಿದೆ. ಈ ಎರಡೂ ಆತ್ಮಹತ್ಯೆ ಸುತ್ತ ಸಾಕಷ್ಟು ಅನುಮಾನಗಳಿದ್ದು ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆ ಮಾಡಿರುವುದಾಗಿ ಮೃತ ಸೋದರಿಯರ ಪೋಷಕರು ದೂರಿದ್ದಾರೆ.

ಮೃತರನ್ನು ಸೌಂದರ್ಯ(21) ಮತ್ತು ಆಕೆಯ ತಂಗಿ ಐಶ್ವರ್ಯ (19) ಎಂದು ಗುರುತಿಸಲಾಗಿದೆ.

2021ರ ಜೂನ್ 8ರಂದು ಐಶ್ವರ್ಯ ತುಮಕೂರಿನ ಆಕೆಯ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಆಕೆಗೆ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನಿಡಿದ್ದರೆಂದು ಆಕೆಯ ಪೋಷಕರು ಆರೋಪಿಸಿದ್ದರು. ಆ ಘಟನೆ ನಡೆದ ಕೇವಲ 17 ದಿನಗಳ ಅಂತರದಲ್ಲಿ ಅಂದರೆ ಜೂನ್ 25ಕ್ಕೆ ಸೌಂದರ್ಯ ಹೊಸನಗರದ ಕರಿಮನೆ ಕಾಡಿಗ್ಗೇರಿಯ ಅವಳ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾಳೆ.

ಘಟನೆ  ವಿವರ

ಸಕಲೇಶಪುರದ ಗೋಳಿಗೊಂಡೆ ಗ್ರಾಮದ ಉದಯ್ ಎನ್ನುವವರ ನಾಲ್ವರು ಮಕ್ಕಳ ಪೈಕಿ ಎರಡನೆಯವಳಾಗಿದ್ದ ಐಶ್ವರ್ಯಳನ್ನು ತುಮಕೂರಿನ ಕುಣಿಗಲ್ ಕಾವೇರಿಪುರದ ನಾಗರಾಜುವಿಗೆ ವಿವಾಹ ಮಾಡಿಕೊಟ್ಟಿದ್ದು ನಾಗರಾಜು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿತ್ತಿದ್ದು ತುಮಕೂರಿನ ಸರಸ್ವತಿಪುರದಲ್ಲಿ ವಾಸವಿದ್ದರು, 

ಸೌಂದರ್ಯ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದು ಕಾಡಿಗ್ಗೇರಿಯ ಉಮೇಶ್ ಎಂಬಾತನೊಂದಿಗೆ 2020ರಲ್ಲಿ ವಿವಾಹವಾಗಿತ್ತು.  ಉಮೇಶ್ ಹಾಗೂ ಸೌಂದರ್ಯ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರೆನ್ನಲಾಗಿದ್ದು ಇಬ್ಬರ ಜಾತಿ ಬೇರೆ ಬೇರೆಯಾಗಿದೆ, ಮನೆಯವರ ವಿರೋಧದ ನಡುವೆ ಅವರು ವಿವಾಹವಾಗಿದ್ದಾಗಿ ಮೂಲಗಳು ಹೇಳಿದೆ.

ತಂಗಿಯ ಅಂತ್ಯ ಸಂಸ್ಕಾರಕ್ಕೆ ತವರಿಗೆ ಬಂದು ಹೋಗಿದ್ದ ಸೌಂದರ್ಯ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಬ್ಬರೂ ಮಕ್ಕಳ ಸಾವಿನಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

SCROLL FOR NEXT