ರಾಜ್ಯ

ಸೋಷಿಯಲ್ ಮೀಡಿಯಾಗಳಲ್ಲಿ ಕೋಮು ಬಣ್ಣಕ್ಕೆ ತಿರುಗಿದ ಅಕ್ರಮ ಬೆಡ್ ಬುಕ್ಕಿಂಗ್ ಹಗರಣ: ಹಲವು ಆಯಾಮಗಳಲ್ಲಿ ತನಿಖೆ

Sumana Upadhyaya

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಇತರ ಕೆಲ ಬಿಜೆಪಿ ನಾಯಕರು ಬಹಿರಂಗಪಡಿಸಿರುವ ಬೆಡ್ ಹಗರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ಕೋವಿಡ್ ನಿರ್ವಹಣೆಯಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಷಯವನ್ನು ಕೋಮುವಾದಗೊಳಿಸುತ್ತಿರುವುದಕ್ಕೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ 16 ಮಂದಿ ಅಲ್ಪಸಂಖ್ಯಾತರ ಹೆಸರುಗಳನ್ನು ಏಕೆ ತರಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯ ಲೋಕಾಯುಕ್ತ ನ್ಯಾಯಾಧೀಶ ನ್ಯಾ. ಪಿ. ವಿಶ್ವನಾಥ ಶೆಟ್ಟಿ ಅವರು ಅಕ್ರಮ ಬೆಡ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡು ಲೋಕಾಯುಕ್ತ ಪೊಲೀಸರಿಗೆ ಸ್ವತಂತ್ರ ತನಿಖೆ ನಡೆಸಿ ಮೂರು ವಾರಗಳೊಳಗೆ ವರದಿ ಸಲ್ಲಿಸುವಂತೆ ಕೇಳಿದ್ದಾರೆ. ಬೆಂಗಳೂರು ನಗರ ಪೊಲೀಸರು ಕೂಡ ಜಯನಗರ ಪೊಲೀಸ್ ಠಾಣೆಯಲ್ಲಿ ಎರಡು ಕೇಸುಗಳನ್ನು ದಾಖಲಿಸಿಕೊಂಡು ಇಬ್ಬರು ವೈದ್ಯರು ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದಾರೆ. ಇನ್ನೂ ನಾಲ್ವರನ್ನು ತನಿಖೆಗೊಳಪಡಿಸಲಾಗಿದೆ.

ಅಕ್ರಮ ಬೆಡ್ ಹಗರಣದಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ಕೂಡ ಭಾಗಿಯಾಗಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳು ನಂಬಿಕೆ, ವಂಚನೆ ಮತ್ತು ಸುಲಿಗೆ ಪ್ರಕರಣದಡಿ ಕೇಸು ದಾಖಲಿಸಲಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೂಡ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎರಡೂ ಕೇಸುಗಳನ್ನು ಈಗ ಸಿಸಿಬಿ ಪೊಲೀಸರಿಗೆ ಹೆಚ್ಚಿನ ತನಿಖೆಗೆ ವರ್ಗಾಯಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ, ಪ್ರಕರಣವನ್ನು ದಕ್ಷಿಣ ವಲಯ ವಿಶೇಷ ಆಯುಕ್ತರು ಕೂಡ ತನಿಖೆ ನಡೆಸುತ್ತಿದ್ದಾರೆ. ಬಿಬಿಎಂಪಿ ಜಂಟಿ ಆಯುಕ್ತ ಮತ್ತು ಕೋವಿಡ್ ಕೇರ್ ಕೇಂದ್ರದ ಮುಖ್ಯಸ್ಥ ಸರ್ಫರಾಜ್ ಖಾನ್ ಅವರು ತಮ್ಮ ಹೆಸರನ್ನು ಈ ಅಕ್ರಮ ಬೆಡ್ ಹಗರಣ ಆರೋಪದಲ್ಲಿ ತಂದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ತಾವು ಕೋವಿಡ್ ವಾರ್ ರೂಂಗೆ ಸಂಬಂಧಪಡದಿದ್ದರೂ ತಾವು ಈ ದಂಧೆಯಲ್ಲಿ ಭಾಗಿಯಾಗಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ತೋರಿಸುತ್ತಿದ್ದಾರೆ, ತಮ್ಮ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತಿರುವುದು ಎಷ್ಟು ಸರಿ ಎಂದು ಕೇಳುತ್ತಿದ್ದಾರೆ.

SCROLL FOR NEXT