ರಾಜ್ಯ

ಬೆಂಗಳೂರು: ಸರ್ಕಾರಿ ಕಚೇರಿಯಲ್ಲೇ ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಕೊಲೆ

Vishwanath S

ಬೆಂಗಳೂರು: ಸಾಂಖ್ಯಿಕ ಇಲಾಖೆಯ ಜಿಲ್ಲಾ ಕಚೇರಿಯ ಶೌಚಾಲಯದಲ್ಲಿ ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಪೀಣ್ಯ ಬಳಿಯ ಕರಿಹೋಬನಹಳ್ಳಿಯಲ್ಲಿ ಗುರುವಾರ ನಡೆದಿದೆ.

ಕೊಲೆಯಾದವರನ್ನು ಹನುಮಂತರಾಯ(41) ಹಾಗೂ ಅವರ ಪತ್ನಿ ಹೊನ್ನಮ್ಮ(34) ಎಂದು ಗುರುತಿಸಲಾಗಿದೆ.

ಗುರುವಾರ ಬೆಳಿಗ್ಗೆ ದುಷ್ಕರ್ಮಿಗಳು ಅವರಿಬ್ಬರನ್ನು ಕೊಲೆ ಮಾಡಿದ್ದು, ಶೌಚಾಲಯದಲ್ಲಿ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರಿಹೋಬನಹಳ್ಳಿಯಲ್ಲಿ ಸಾಂಖ್ಯಿಕ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಹನುಮಂತರಾಯ ಸೆಕ್ಯುರಿಟಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೇ, ಅವರ ಪತ್ನಿ ಹೊನ್ನಮ್ಮ ಸಹ ಅದೇ ಕಚೇರಿಯಲ್ಲಿ ಸ್ವಚ್ಛತೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ ಇಬ್ಬರೂ ಕಚೇರಿಗೆ ಬಂದಿದ್ದು, ಅದೇ ಸಂದರ್ಭದಲ್ಲೇ ದುಷ್ಕರ್ಮಿಗಳು, ಇಬ್ಬರನ್ನೂ ಕೊಲೆ ಮಾಡಿ ಶೌಚಾಲಯದಲ್ಲಿ ಮೃತದೇಹ ಇರಿಸಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ದಂಪತಿಯ ಪುತ್ರನೇ ಕೊಲೆ ಮಾಡಿರುವ ಅನುಮಾನವಿದೆ. ಸದ್ಯ ಆತ ನಾಪತ್ತೆಯಾಗಿದ್ದು, ಆತನಿಗಾಗಿ ಬಲೆ ಬೀಸಲಾಗಿದೆ ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT