ರಾಜ್ಯ

ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಕೋವಿಡ್ ರೋಗಿಗಳ ಕುಟುಂಬಸ್ಥರು ಸಿಎಂ ನಿವಾಸ, ವಿಧಾನ ಸೌಧದ ಮುಂದೆ ಧರಣಿ, ಪ್ರತಿಭಟನೆ!

Sumana Upadhyaya

ಬೆಂಗಳೂರು: ಕೋವಿಡ್ ಸೋಂಕಿನ ಎರಡನೇ ಅಲೆ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಬೆಂಗಳೂರು ನಗರದಲ್ಲಿ ಆಕ್ಸಿಜನ್ ಭರಿತ ಬೆಡ್ ಗಳಿಗೆ ಕೊರತೆಯುಂಟಾಗಿದೆ. ರೋಗಿಗಳ ಕುಟುಂಬಸ್ಥರು ಹೈರಾಣಾಗಿ ಹೋಗುತ್ತಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಈ ರೀತಿಯ ಸನ್ನಿವೇಶದಲ್ಲಿ ಅಸಹಜ ಬೆಳವಣಿಗೆ ನಡೆಯಿತು. ರೋಗಿಯೊಬ್ಬರ ಪತ್ನಿ ತನ್ನ ಗಂಭೀರ ಸ್ವರೂಪದಲ್ಲಿರುವ ಪತಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲವೆಂದು ಮುಖ್ಯಮಂತ್ರಿ ಯಡಿಯೂರಪ್ಪನವರ ಅಧಿಕೃತ ನಿವಾಸ ಕಾವೇರಿ ಮುಂದೆ ಧರಣಿ ನಡೆಸಿದರು. ಇದು ರಾಜ್ಯದಲ್ಲಿ ಆಸ್ಪತ್ರೆಗಳಲ್ಲಿ ಎದುರಿಸುತ್ತಿರುವ ಬೆಡ್ ಸಮಸ್ಯೆಗೆ ಜ್ವಲಂತ ಸಾಕ್ಷಿಯಾಗಿದೆ.

ಮುಖ್ಯಮಂತ್ರಿಗಳ ಕಾರ್ಯಾಲಯದ ಅಧಿಕಾರಿಗಳಿಗೆ ಮಹಿಳೆಯ ಧರಣಿ ಗಮನ ಸೆಳೆದು ಕೊನೆಗೂ ಆಕೆಯ ಕೋವಿಡ್ ಪತಿಗೆ ಆಸ್ಪತ್ರೆ ವ್ಯವಸ್ಥೆ ಮಾಡಿದರು. ಆದರೆ ಆಂಬ್ಯುಲೆನ್ಸ್ ನಲ್ಲಿ ಹೋಗುವಾಗ ದಾರಿ ಮಧ್ಯೆ ಅಸುನೀಗಿದರು. ಮೃತರನ್ನು ರಾಮೋಹಳ್ಳಿ ನಿವಾಸಿಯೆಂದು ಗುರುತಿಸಲಾಗಿದೆ. ಇದಕ್ಕೂ ಮುನ್ನ ಕುಟುಂಬಸ್ಥರು ಬೆಂಗಳೂರಿನಲ್ಲಿ 12ಕ್ಕೂ ಅಧಿಕ ಆಸ್ಪತ್ರೆಗಳಿಗೆ ಅಲೆದಾಡಿದ್ದರು, ಎಲ್ಲಿಯೂ ಸಿಗದೆ ಮುಖ್ಯಮಂತ್ರಿಗಳ ನಿವಾಸದ ಮುಂದೆ ಬಂದಿದ್ದರು.

ನಿನ್ನೆ ಮತ್ತೊಂದು ಪ್ರಕರಣದಲ್ಲಿ ವಿಧಾನ ಸೌಧದ ಹೊರಗೆ ಮತ್ತೊಬ್ಬ ಕೋವಿಡ್ ರೋಗಿಯ ಕುಟುಂಬದವರು ಪ್ರತಿಭಟನೆ ಮಾಡಿದ್ದರು. ರೋಗಿಯ ಪುತ್ರಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ತಮ್ಮ ತಾಯಿಯ ಆರೋಗ್ಯ ತೀರಾ ಹದಗೆಡುತ್ತಿತ್ತು, ಆದರೆ ಎಲ್ಲಿಯೂ ಆಸ್ಪತ್ರೆಗಳಲ್ಲಿ ಬೆಡ್ ಸಿಗಲಿಲ್ಲ, ಜನಪ್ರತಿನಿಧಿಗಳ ಗಮನ ಸೆಳೆಯಲು ಇಲ್ಲಿಗೆ ಬಂದಿರುವುದಾಗಿ ಹೇಳಿದರು.

ಈ ಸಮಯದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್ ಮಧ್ಯೆ ಪ್ರವೇಶಿಸಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿ ಸರ್ಕಾರಿ ಆಸ್ಪತ್ರಗೆ ದಾಖಲಿಸಿದರು. ಕುಟುಂಬಸ್ಥರು ಧರಣಿ ನಡೆಸುವಾಗ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಬಂದು ಪ್ರತಿಭಟನೆಗೆ ಕೈಜೋಡಿಸಿದರು, ಅವರನ್ನು ಪೊಲೀಸರು ಬಳಿಕ ವಶಕ್ಕೆ ತೆಗೆದುಕೊಂಡರು.

SCROLL FOR NEXT