ಕುಂದಾಪುರ: ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಬ್ರಹ್ಮರಥ (ತೇರು) ನಿರ್ಮಾಣವು ಅಕ್ಷಯ ತೃತೀಯದ ಶುಭ ದಿನದಂದು ಕುಂದಾಪುರದ ಸಮೀಪದ ಕುಂಭಾಶಿಯಲ್ಲಿ ಪ್ರಾರಂಭವಾಗಿದೆ.
ಸುಮಾರು 4 ಕೋಟಿ ರೂ. ವೆಚ್ಚದ ಈ ಬ್ರಹ್ಮರಥ ಪೂರ್ಣಗೊಂಡ ನಂತರ ಕಿಷ್ಕಿಂದೆಯ ಹನುಮ ಜನ್ಮಭೂಮಿ ಕ್ಷೇತ್ರದ ಪರವಾಗಿ ರಾಮ ಮಂದಿರಕ್ಕೆ ಸೇರಲಿದೆ.
ಪ್ರಸಿದ್ದ ಶಿಲ್ಪಿಗಳಾದ ಕೋಟೇಶ್ವರ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದ ಲಕ್ಷ್ನಿನಾರಾಯಣ ಆಚಾರ್ಯ ಮತ್ತು ರಾಜಗೋಪಾಲಾಚಾರ್ಯರು 50 ನುರಿತ ಕುಶಲಕರ್ಮಿಗಳ ತಂಡದ ಸಹಾಯದಿಂದ ಬ್ರಹ್ಮರಥದ ನಿರ್ಮಾಣ ಮಾಡಲಿದ್ದಾರೆ. ಈ ರಥ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ರಥದ ಮಾದರಿಯಲ್ಲಿರಲಿದೆ.
84 ಅಡಿ ಎತ್ತರ ಮತ್ತು 26 ಅಡಿ ಅಗಲದ ರಥದಲ್ಲಿ 10 ಅಡಿ ಎತ್ತರದ ಚಕ್ರಗಳಿವೆ. ರಥದ ಮಂಟಪ ಐದು ಅಡಿಗಳಿದ್ದರೆ, ಕಲಶ ಸಹ ಅಷ್ಟೇ ಎತ್ತರವನ್ನು ಹೊಂದಿರಲಿದೆ. ರಥದ ತೂಕ 50 ಟನ್ ಆಗಿರಲಿದೆ.