ರಾಜ್ಯ

ಕಂದಕಕ್ಕೆ ಬಿದ್ದು ಅಪಾಯಕ್ಕೆ ಸಿಲುಕಿದ್ದ ಆನೆ; ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಅರಣ್ಯ ಸಿಬ್ಬಂದಿ

Srinivasamurthy VN

ಕೊಡಗು: ಆಹಾರ ಅರಸುತ್ತ ನಾಡಿಗೆ ಬಂದಿದ್ದ ಕಾಡಾನೆಯೊಂದು ಕಂದಕ್ಕೆ ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿತ್ತು. ಈ ವೇಳೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆನೆಯನ್ನು ರಕ್ಷಿಸಿ ಮರಳಿ ಕಾಡಿಗೆ ಅಟ್ಟಿದ್ದಾರೆ.

ಹೌದು.. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಅವರೆಗುಂದ ಅರಣ್ಯದಂಚಿನಲ್ಲಿ ಈ ಘಟನೆ ನಡೆದಿದ್ದು, ಕಾಡಾನೆಯೊಂದು ಅರಣ್ಯ ದಾಟಿ ಕಾಫಿ ತೋಟಕ್ಕೆ ಬರುತ್ತಿದ್ದ ವೇಳೆ ಆಯತಪ್ಪಿ ಕಾಲು ಜಾರಿ ಕಂದಕಕ್ಕೆ ಬಿದ್ದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೆಳಗ್ಗೆ ಗಸ್ತಿನಲ್ಲಿದ್ದ ಸಂದರ್ಭ ಆನೆ  ಕಿರುಚಾಟದ ಶಬ್ದ ಕೇಳಿ ಸ್ಥಳಕ್ಕೆ ತೆರಳಿ ಪರಿಶೀಲನೆ ಸಂದರ್ಭ ಕಂದಕದಲ್ಲಿ ಆನೆ ಬಿದ್ದಿರುವುದು ಕಂಡುಬಂದಿದೆ.

ಕಂದಕದಿಂದ ಮೇಲೇಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಜೆಸಿಬಿ ಮೂಲಕ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ಆರಂಭದಲ್ಲಿ ಮರದ ಕೊಂಬೆಗಳನ್ನು ಇಟ್ಟು ಮೇಲೆತ್ತಲು ಪ್ರಯತ್ನಿಸಿದರೂ ಅದು ಸಫಲವಾಗಲಿಲ್ಲ..ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗಳು  ಜೆಸಿಬಿಯೊಂದನ್ನು ತರಿಸಿ ಮಣ್ಣು ಸಮತಟ್ಟು ಮಾಡಿ ಆನೆ ಮೇಲೆತ್ತಿ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕಾಡಾನೆಯನ್ನು ಮೇಲೆತ್ತುವ ಸಂದರ್ಭದಲ್ಲಿ ಮೇಲೆ ಬಂದ ಕಾಡಾನೆ ಜೆಸಿಬಿ ಮೇಲೆ ದಾಳಿಗೆ ಮುಂದಾಯಿತಾದರೂ ಈ ಸಂದರ್ಭ ಪಟಾಕಿ ಸಿಡಿಸಿ ಆನೆಯನ್ನು ಕಾಡಿಗಟ್ಟಲಾಯಿತು.

SCROLL FOR NEXT