ರಾಜ್ಯ

ಜನರು ಸಹಕಾರ ನೀಡದಿದ್ದರೆ ಇನ್ನಷ್ಟು ಕಠಿಣ ಲಾಕ್ ಡೌನ್: ಗೃಹ ಸಚಿವ ಬಸವರಾಜ್ ಬೊಮ್ಮಾಯಿ

Sumana Upadhyaya

ಬೆಂಗಳೂರು: ಕೊರೋನಾ ಲಾಕ್ ಡೌನ್ ಸಮಯದಲ್ಲಿ ಪೊಲೀಸರು ಮತ್ತು ಗೃಹ ಇಲಾಖೆ ಇನ್ನಷ್ಟು ಕಠಿಣ ನಿಯಮಗಳನ್ನು ಅನುಸರಿಸುವ ಸಾಧ್ಯತೆಯಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಕೊರೋನಾ ಸೋಂಕಿನ ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಲಾಕ್ ಡೌನ್ ಮೇ 24ರವರೆಗೆ ಜಾರಿಯಲ್ಲಿರುತ್ತದೆ. ಹಲವು ಕಡೆಗಳಲ್ಲಿ ಜನರು ಲಾಕ್ ಡೌನ್ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿರುವುದಿಲ್ಲ ಕಂಡುಬರುತ್ತಿಲ್ಲ. ಜನರು ಬೇಕಾಬಿಟ್ಟಿಯಾಗಿ ರಸ್ತೆಗಿಳಿದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡುವಾಗ ಸಚಿವರು ಹೇಳಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಕೊರೋನಾ ಸೋಂಕು ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಈಗಾಗಲೇ ಲಾಕ್ ಡೌನ್ ಜಾರಿ ಮಾಡಿ ಕಠಿಣ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಜನರು ಲಾಕ್ ಡೌನ್ ಜಾರಿಯನ್ನು ಅರ್ಥಮಾಡಿಕೊಂಡು ಸಹಕಾರ ನೀಡಬೇಕು ಎಂದರು.

ಅನಗತ್ಯ ಓಡಾಡುವವರ ವಾಹನಗಳನ್ನು ವಶಪಡಿಸಿಕೊಳ್ಳುವ ಕ್ರಮಗಳು ಸೇರಿದಂತೆ ಪೊಲೀಸರು ನಿಯಮ ಉಲ್ಲಂಘಿಸಿದವರ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯವಾಗುತ್ತದೆ ಎಂದು ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಯಾದಗಿರಿಯಲ್ಲಿ ಬೈಕ್ ನಲ್ಲಿ 5 ಜನ ಕುಳಿತುಕೊಂಡು ಮದುವೆಗೆ ಹೋಗುತ್ತಿರುವ ಬಗ್ಗೆ ವರದಿಯಾಗಿದೆ, ಇಂಥವರಿಗೆ ನಾವು ಏನು ಹೇಳುವುದು, ಜನರು ಅರ್ಥಮಾಡಿಕೊಂಡು ಪೊಲೀಸರ ಜೊತೆ ಸಹಕಾರ ನೀಡಿ ಲಾಕ್ ಡೌನ್ ಯಶಸ್ವಿ ಮಾಡಬೇಕು ಎಂದರು.
ಲಾಕ್ ಡೌನ್ ವಿಸ್ತರಣೆ ಬಗ್ಗೆ ಕೇಳಿದಾಗ ಮೇ 23ಕ್ಕೆ ಸರ್ಕಾರ ತೀರ್ಮಾನಿಸಿ ಘೋಷಣೆ ಮಾಡುತ್ತದೆ ಎಂದರು.

SCROLL FOR NEXT