ರಾಜ್ಯ

ಅಲ್ಪಸಂಖ್ಯಾತರ ಬೆಂಬಲ ಕಾಂಗ್ರೆಸ್ ಗೆಲುವಿಗೆ ಸಹಾಯ ಮಾಡಲಿದೆ: ತನ್ವೀರ್ ಸೇಠ್

Manjula VN

ಮೈಸೂರು: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ತನ್ವೀರ್ ಸೇಠ್ ಅವರು ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಕಾಂಗ್ರೆಸ್ ಇಂದಿರಾ ಭವನದಲ್ಲಿ ಭಾನುವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ ಮತ್ತು ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಖ್ಯಾತಿಯಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ್ದಾರೆ.

ಇಂದಿರಾ ಗಾಂಧಿ ಭಾರತದ ಪುಟಗಳಲ್ಲಿ ಅಜರಾಮರವಾದ ವ್ಯಕ್ತಿತ್ವವನ್ನು ಹೊಂದಿದ್ದವರು. ಭಾರತದ ಪ್ರಧಾನಮಂತ್ರಿಯಾಗಿ ಅವರು ಅನೇಕ ರಾಷ್ಟ್ರಗಳ ಜೊತೆ ಭಾರತವನ್ನು ಮುಂಚೂಣಿಗೆ ತರುವಲ್ಲಿ ಅಪಾರ ಶ್ರಮವನ್ನು ವಹಿಸಿದರು. ಅವರು 18 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿ ಭಾರತದ ಮೂಲೆ ಮೂಲೆಯಲ್ಲೂ ಮನೆಮಾತಾಗಿದ್ದರು. ಅವರನ್ನು ಕಳೆದುಕೊಂಡ ದಿನ ಇಡೀ ರಾಷ್ಟ್ರಕ್ಕೆ ಕರಾಳವಾಗಿ ಪರಿಣಮಿಸಿತ್ತು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಶ್ರಮವಹಿಸಿ ಕಟ್ಟಿದ್ದ ಭಾರತವನ್ನು ಬಿಜೆಪಿ ಮಾರಾಟ ಮಾಡುತ್ತಿದೆ. ಇದು ನಮ್ಮ ದೇಶದ ದುರಂತವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರನ್ನು ಕಣಕ್ಕಿಳಿಸಿದರೂ ಪ್ರಮುಖ ಅಲ್ಪಸಂಖ್ಯಾತರು ಕಾಂಗ್ರೆಸ್ ಪರವಾಗಿ ನಿಂತಿದ್ದಾರೆಂದು ಹೇಳಿದರು.

SCROLL FOR NEXT