ರಾಜ್ಯ

ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯಲ್ಲಿ ಇಳಿಕೆ: ಕೊರೋನಾ ಮೇಲೆ ಹಿಡಿತ ಕಳೆದುಕೊಳ್ಳುವ ಆತಂಕ?

Manjula VN

ಬೆಂಗಳೂರು: ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಆಚರಣೆ, ಉಪಚುನಾವಣೆ ಮತ್ತು ನಟ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಭಾರಿ ಜನಸಂದಣಿ ಸೇರಿದ ಹೊರತಾಗಿಯೂ ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆ ಏರಿಕೆಯಾಗದೆ, ಇಳಿಕೆಯಾಗಿರುವುದು ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ.

ನವೆಂಬರ್ ತಿಂಗಳಿನಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆ  ಕಡಿಮೆಯಾಗಿದ್ದು, ಈ ಬೆಳವಣಿಗೆಯು ಕೋವಿಡ್ ಮೇಲಿನ ಹಿಡಿತವನ್ನು ಸರ್ಕಾರ ಕಳೆದುಕೊಳ್ಳಲಿದೆಯೇ  ಎಂಬ ಆತಂಕವನ್ನು ಸೃಷ್ಟಿಸಿದೆ.

ಈ ತಿಂಗಳ ಕೊನೆಯ ಆರು ದಿನಗಳಲ್ಲಿ ಒಂದು ದಿನ ಕೂಡ ಪರೀಕ್ಷೆಗಳ ಸಂಖ್ಯೆ 1 ಲಕ್ಷದ ಗಡಿ ತಲುಪಿಲ್ಲ ಎಂಬುದು ವರದಿಗಳಿಂತ ತಿಳಿದುಬಂದಿದೆ.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಕೆಲ ದಿನಗಳಲ್ಲಿ 1 ಲಕ್ಷ ಗಡಿ ದಾಟಿ 1.6 ಲಕ್ಷ ದಾಟಿರುವುದು ಕಂಡು ಬಂದಿತ್ತು. ಆದರೆ. ಕಳೆದ ಸೋಮವಾರ ಮತ್ತು ಶನಿವಾರದ ನಡುವೆ 53,488 ಮತ್ತು 80,145 ದೈನಂದಿನ ಪರೀಕ್ಷೆಗಳು ನಡೆಸಲಾಗಿದೆ.

ಕೋವಿಡ್ ಪ್ರಕರಣಗಳು ಇಳಿಮುಖವಾಗಿರುವುದರಿಂದ ರ್ಯಾಂಡಮ್ ಪರೀಕ್ಷೆಗೊಳಗಾಗಲು ಜನರು  ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಪ್ರಕರಣಗಳು ಕಡಿಮೆ ಎಂದೇ ಕಂಡು ಬರುತ್ತಿದೆ. ಪರೀಕ್ಷೆಗೊಳಗಾಗಲು ಮುಂದಾಗದ ಜನರು ಲಸಿಕೆ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆಂದು ಡಾ.ಸಿಎನ್ ಮಂಜುನಾಥ್ ಅವರು ಹೇಳಿದ್ದಾರೆ.

ಈ ಹಿಂದೆ ದೈನಂದಿನ ಪರೀಕ್ಷೆಗಳು 1.5 ಲಕ್ಷದಿಂದ 1.75 ಲಕ್ಷದ ನಡುವೆ ಇರುತ್ತಿದ್ದವು. ಶಾಲೆಗಳನ್ನು ಪುನರಾರಂಭಿಸುವುದರ ಜೊತೆಗೆ ಈ ತಿಂಗಳು ಹೆಚ್ಚೆಚ್ಚು ಜನರು ಒಂದೆಡೆ ಸೇರಿದ ಪರಿಣಾಮ ನಾವು ದಿನಕ್ಕೆ ಕನಿಷ್ಠ 1 ಲಕ್ಷ ಪರೀಕ್ಷೆಯನ್ನಾದರೂ ನಡೆಸಲೇಬೇಕಿದೆ ಎಂದು ತಿಳಿಸಿದ್ದಾರೆ.

ಆರೋಗ್ಯ ಆಯುಕ್ತ ರಣದೀಪ್ ಡಿ ಅವರು ಮಾತನಾಡಿ, ರ್ಯಾಂಡಮ್ ಪರೀಕ್ಷೆಗಳ ಸಂಖ್ಯೆ ಹೆಚ್ಚಿರುವ ಅಗತ್ಯವಿದೆ. ಈ ಕುರಿತ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುತ್ತದೆ. ಲಕ್ಷಣ ರಹಿತರು, ಸಾರಿ ಹಾಗೂ ಐಎಲ್ಐ ಲಕ್ಷಣ ಇರುವವನ್ನು ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಹೇಳಿದ್ದಾರೆ ಹೇಳಿದ್ದಾರೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮಾತನಾಡಿ, ಪುನೀತ್ ರಾಜ್ ಕುಮಾರ್ ಅವರ ನಿಧರ ಹಿನ್ನೆಲೆಯಲ್ಲಿ ಒಂದೆಡೆ 20 ಲಕ್ಷಕ್ಕೂ ಹೆಚ್ಚು ಮಂದಿ ಸೇರಿದ್ದರು. ಇದಷ್ಟೇ ಅಲ್ಲದೆ, ದೀಪಾವಳಿ, ಉಪಚುನಾವಣೆ ವೇಳೆಯೂ ಜನರು ಸೇರಿದ್ದರು. ಹೀಗಾಗಿ ಮುಂದಿನ 2-3 ವಾರಗಳಲ್ಲಿ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ತಾಂತ್ರಿಕ ಸಲಹಾ ಸಮಿತಿಯು ಪ್ರತೀನಿತ್ಯ 1-1 ಲಕ್ಷ ಪರೀಕ್ಷೆ ನಡೆಸುವಂತೆ ಸಲಹೆ ನೀಡಿದೆ. ಈಗಾಗಲೇ ಬೆಂಗಳೂರಿನಲ್ಲಿ ಪ್ರತೀನಿತ್ಯ 50 ಸಾವಿರ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಜಿಲ್ಲೆಗಳು ಪ್ರಮುಖವಾಗಿ ಗಡಿ ಪ್ರದೇಶಗಳಲ್ಲಿ 60,000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಪರೀಕ್ಷೆ ಹೆಚ್ಚಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಶೀತ, ನೆಗಡಿ, ಉಸಿರಾಟ ಸಮಸ್ಯೆ ಎಂದು ಹೇಳಿ ಔಷಧಿಗಳನ್ನು ಖರೀದಿ ಮಾಡುತ್ತಿರುವ ಜನರ ಕುರಿತು ಸರ್ಕಾರ ಮಾಹಿತಿ ಕಲೆ ಹಾಕುತ್ತಿದೆ. ಜನರು ಪರೀಕ್ಷೆಗೊಳಗಾಗುವಂತೆ ಜಾಗೃತಿ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಹೆಚ್ಚೆಚ್ಚು ಜನರಿರುವ ಪ್ರದೇಶಗಳಲ್ಲಿ ಮತ್ತೆ ಪರೀಕ್ಷೆಗಳನ್ನು ಆರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

SCROLL FOR NEXT