ರಾಜ್ಯ

ಬೆಂಗಳೂರು: ರಾಡ್ ನಿಂದ ಹೊಡೆದು ಪತಿಯನ್ನು ಹತ್ಯೆಗೈದ ಪತ್ನಿ! ಲೈಂಗಿಕ ದುರ್ನಡತೆಯ ಆರೋಪ

Nagaraja AB

ಬೆಂಗಳೂರು: ಪತ್ನಿಯೊಬ್ಬಳು ತನ್ನ 46ರ ಹರಯದ ರಿಯಲ್ ಎಸ್ಟೇಟ್ ಉದ್ಯಮಿ ಪತಿಯನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಸಾಯಿಸಿರುವ ಘಟನೆ  ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ನಂತರ ಪೊಲೀಸರ ಮುಂದೆ ಮಹಿಳೆ ಹಾಜರಾಗಿದ್ದು, ತನ್ನ ಪತಿ ಮೇಲೆ ಲೈಂಗಿಕ ದುರ್ನಡತೆಯ ಆರೋಪ ಮಾಡಿದ್ದಾಳೆ.

ಮೃತರನ್ನು ಹಾರೋಕ್ಯಾತನಹಳ್ಳಿ ನಿವಾಸಿ ಸ್ವಾಮಿ ರಾಜ್ ಎಂದು ಗುರುತಿಸಲಾಗಿದೆ. ಈತ ಮೊದಲ ಪತ್ನಿಯಿಂದ ಬೇರ್ಪಟ್ಟು ಆರೋಪಿಯನ್ನು ಮದುವೆಯಾಗಿದ್ದ. ಶನಿವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ತನ್ನ ಸಂಬಂಧಿಕರೊಬ್ಬರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ರಾಜ್ ಒತ್ತಾಯಿಸಿದ ನಂತರ ದಂಪತಿ ನಡುವೆ ಜಗಳ ನಡೆದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ ಈ ರೀತಿ ಕೆಲ ದಿನಗಳಿಂದ ಒತ್ತಡ ಹಾಕುತ್ತಿದ್ದ ಎನ್ನಲಾಗಿದೆ.  ಇದರಿಂದ ಕೋಪಗೊಂಡ ಪತ್ನಿ ಶನಿವಾರ ಮಲಗಿದ್ದ ರಾಜ್ ಅವರ ತಲೆಗೆ ಕಬ್ಬಿಣದ ರಾಡ್ ತೆಗೆದುಕೊಂಡು ಹೊಡೆದಿದ್ದಾಳೆ. ಬಳಿಕ ಮಾದನಾಯಕನಹಳ್ಳಿ ಠಾಣೆಗೆ ತೆರಳಿ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಮೃತಪಟ್ಟ ರಾಜ್ ಹಾಗೂ  ಆತನ ಎರಡನೇ ಪತ್ನಿ 10 ವರ್ಷಗಳ ಹಿಂದೆ ಮದುವೆಯಾಗಿದ್ದು, ಆಗಾಗ್ಗೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಜಗಳವಾಡುತ್ತಿದ್ದರು, ಇದು ಕೊಲೆಯ ಹಿಂದಿನ ನಿಜವಾದ ಉದ್ದೇಶ ಎಂದು ರಾಜ್ ನ ಮೊದಲ ಹೆಂಡತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದು, ಆಕೆ ಕೇಸ್ ದಾಖಲಿಸಿದ್ದಾಳೆ.

SCROLL FOR NEXT