ಶಿವಮೊಗ್ಗ: ಬೈಕ್ ಗೆ ಢಿಕ್ಕಿ ತಪ್ಪಿಸಲು ಹೋದ ಗೂಡ್ಸ್ ಗಾಡಿ ಚಾಲಕ ರಸ್ತೆ ಮೇಲೆ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಗುದ್ದಿರುವ ಘಟನೆ ಶನಿವಾರ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಿಎಚ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಬಿಎಚ್ ರಸ್ತೆಯಲ್ಲಿನ ಸುಜುಕಿ ಶೋರೂಂ ಬಳಿಯ ರಸ್ತೆಯಲ್ಲಿ ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುತ್ತಿದ್ದಾಗ ಪಕ್ಕದ ರಸ್ತೆಯಿಂದ ವೇಗವಾಗಿ ಬಂದ ಗೂಡ್ಸ್ ಗಾಡಿ ಬೈಕ್ ಗೆ ಆಗಬಹುದಾಗಿದ್ದ ಸಂಭಾವ್ಯ ಢಿಕ್ಕಿ ತಪ್ಪಿಸಲು ನೇರವಾಗಿ ನುಗ್ಗಿದೆ. ಆದರೆ ಅಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಗೂಡ್ಸ್ ಗಾಡಿ ಹರಿದಿದ್ದು, ವಾಹನ ಗುದ್ದಿದ ರಭಸಕ್ಕೆ ವಿದ್ಯಾರ್ಥಿನಿಯರು ಪಕ್ಕದ ಫುಟ್ ಪಾತ್ ಮೇಲೆ ಬಿದ್ದಿದ್ದಾರೆ.
ಪ್ರಕರಣದಲ್ಲಿ ಓರ್ವ ಯುವತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮತ್ತೋರ್ವ ಯುವತಿ ಸ್ಥಿತಿ ಗಂಭೀರವಾಗಿದೆ. ಗಾಯಾಳು ವಿದ್ಯಾರ್ಥಿನಿಯರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ವಿಚಾರ ತಿಳಿದಕೂಡಲೇ ಸ್ಥಳಕ್ಕಾಗಮಿಸಿದ ಉಪ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಪರಿಶೀಲನೆ ನಡೆಸಿದರು. ಅಲ್ಲದೆ ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.