ರಾಜ್ಯ

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ: ತಂದೆ ಶಂಕರ್‌ ಸೇರಿ ಮೂವರ ಬಂಧನ

Lingaraj Badiger

ಬೆಂಗಳೂರು: ನಗರದ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಹಲ್ಲೇಗೆರೆ ಶಂಕರ್ ಸೇರಿ ಮೂವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಇತ್ತೀಚೆಗೆ ತಿಗಳರಪಾಳ್ಯದಲ್ಲಿ ಭಾರತಿ(51), ಅವರ ಮಕ್ಕಳಾದ ಸಿಂಚನಾ(34), ಸಿಂಧುರಾಣಿ(33) ಹಾಗೂ ಮಧುಸಾಗರ್(25) ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಂಧೂರಾಣಿ ಅವರ ಒಂಬತ್ತು ತಿಂಗಳ ಮಗು ಸಹ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ತಾಯಿಯೇ ಮಗುವಿನ ಕೊಲೆ ನಡೆದಿರುವುದು ಸಾಬೀತಾಗಿತ್ತು.

ಪತ್ನಿ ಹಾಗೂ ಮಕ್ಕಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದನ್ವಯ ಶಂಕರ್, ಅವರ ಅಳಿಯಂದಿರಾದ ಶ್ರೀಕಾಂತ್ ಹಾಗೂ ಪ್ರದೀಪ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಪ್ರದೀಪ್ ತಂದೆ–ತಾಯಿಯನ್ನು ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಶಂಕರ್ ಹಾಗೂ ಅಳಿಯಂದಿರು, ಮೃತರಿಗೆ ಕಿರುಕುಳ ನೀಡಿರುವುದು ಮೇಲ್ನೋಟಕ್ಕೆ ಬಹಿರಂಗಗೊಂಡಿದೆ. ಅವರ ಕಿರುಕುಳದಿಂದ ಬೇಸತ್ತು ಭಾರತಿ ಹಾಗೂ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಿಂದ ಸಾಬೀತಾಗಿದೆ ಎಂದು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರ್, ಶ್ರೀಕಾಂತ್ ಹಾಗೂ ಪ್ರದೀಪ್ ಅವರನ್ನು ಸದ್ಯ ಬಂಧಿಸಲಾಗಿದ್ದು, ಮೂವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು. ನಂತರ, ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರಲ್ಲಿ ವಿನಂತಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಇನ್ನಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದು ಅವರಿಗಾಗಿ ಬಲೆ ಬೀಸಲಾಗಿದೆ ಎಂದರು.

SCROLL FOR NEXT