ರಾಜ್ಯ

ಕೋವಿಡ್​ನಿಂದ ಸತ್ತವರ ಆತ್ಮಕ್ಕೆ ಸದ್ಗತಿ: 1200 ಮಂದಿಯ ಪಿಂಡ ಪ್ರದಾನಕ್ಕೆ ಸಚಿವ ಆರ್. ಅಶೋಕ್ ಮುಂದು!

Shilpa D

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ವಾರಸುದಾರರಿಲ್ಲದ ಮೃತ ಶರೀರಗಳಿಗೆ ಅಂತ್ಯಕ್ರಿಯೆ ಮಾಡಿಸಿ, ಚಿತಾಭಸ್ಮ ವಿಸರ್ಜಿಸಿದ್ದ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಪುನಃ ಅಂತಹುದೇ ಕಾರ್ಯಕ್ಕೆ ಅಣಿಯಾಗಿದ್ದಾರೆ. 

ಕೋವಿಡ್‌ನಿಂದ ಮೃತಪಟ್ಟ 1,200 ಮಂದಿಯ ವಾರಸುದಾರರು ಪತ್ತೆಯಾಗದ ಕಾರಣ ಅವರಿಗೆ ಪಿತೃಪಕ್ಷದ ವೇಳೆ ವಿಷ್ಣು ಶ್ರಾದ್ಧ ಮಾಡಿ ಪಿಂಡಪ್ರದಾನ ಮಾಡಲು ಕಂದಾಯ ಸಚಿವ ಆರ್. ಅಶೋಕ ಮುಂದಾಗಿದ್ದಾರೆ. ಕೋವಿಡ್‌ ಎರಡನೇ ಅಲೆಯಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಯಾರೂ ಮುಂದೆ ಬರುತ್ತಿರಲಿಲ್ಲ. ಕೋವಿಡ್ ಭಯದಿಂದಾಗಿ ಮೃತರ
ಕುಟುಂಬದವರೂ ಈ ಕೆಲಸ ಮಾಡಲು ಅಂಜುವ ವಾತಾವರಣ ಇತ್ತು. 

ಇಂತಹ 1200 ಜನರ ಅಂತ್ಯಕ್ರಿಯೆಯನ್ನು ವಿವಿಧ ಶವಾಗಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೇ ನೆರವೇರಿಸಿದ್ದರು. ಶವಸಂಸ್ಕಾರವಾದ ಬಳಿಕ ಚಿತಾಭಸ್ಮವನ್ನೂ ಕೊಂಡೊಯ್ಯಲು ಯಾರೂ ಬಂದಿರಲಿಲ್ಲ. ಈ ಬಾರಿ ಅವರು ಪಿತೃ ಪಕ್ಷದ ನಿಮಿತ್ತ ಪಿಂಡ ಪ್ರದಾನ ಕ್ರಿಯೆ ನೆರವೇರಿಸಿ ಕೋವಿಡ್‌ನಿಂದ ಮೃತರಾದವರ ಆತ್ಮಗಳಿಗೆ ಸದ್ಗತಿ ಕೋರಲಿದ್ದಾರೆ.

ಅನಾಥ ಶವಗಳ ಚಿತಾಭಸ್ಮ ಹಾಗೂ ಅಸ್ಥಿಯನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿ ಕಾವೇರಿಯಲ್ಲಿ ವಿಸರ್ಜಿಸಿದ್ದ ಸಚಿವ ಅಶೋಕ, ಮೃತರ ಅಂತ್ಯೋತ್ತರ ಕ್ರಿಯೆಗಳನ್ನು ಸಾಮೂಹಿಕವಾಗಿ ನಡೆಸಿದ್ದರು. ಕೆಲ ತಿಂಗಳುಗಳ ಹಿಂದೆ ಅಸ್ಥಿ ವಿಸರ್ಜನೆ ಮಾಡಿರುವುದರಿಂದ ಸೋಮವಾರ (ಅ.4) ವಿಷ್ಣು ಶ್ರಾದ್ಧ ನಡೆಸಲು ಅಶೋಕ ತೀರ್ಮಾನಿಸಿದ್ದಾರೆ.

ಪಿತೃಪಕ್ಷ ಹೊತ್ತಿನಲ್ಲಿ ಶ್ರಾದ್ಧ ನಡೆಸಲು ಅಶೋಕ ನಿರ್ಧರಿಸಿದ್ದಾರೆ. ಪಂಡಿತ ಭಾನುಪ್ರಕಾಶ ಶರ್ಮಾ ಅವರ ಸೂಚನೆಯ ಮೇರೆಗೆ ಅಕ್ಟೋಬರ್ 4ರಂದು ದಿನ ನಿಗದಿ ಮಾಡಲಾಗಿದೆ ಎಂದೂ ಮೂಲಗಳು ಹೇಳಿವೆ.

SCROLL FOR NEXT