ರಾಜ್ಯ

ರಾಜ್ಯಕ್ಕೆ ರಸಗೊಬ್ಬರ ಬೇಡಿಕೆ ಪೂರೈಸುವ ಭರವಸೆ ನೀಡಿದ ಕೇಂದ್ರ

Lingaraj Badiger

ನವದೆಹಲಿ/ಬೆಂಗಳೂರು: ಈ ಬಾರಿ ರಾಜ್ಯದಲ್ಲಿ ಬಿತ್ತನೆ ಹೆಚ್ಚಾಗಿದ್ದು ರಸಗೊಬ್ಬರಕ್ಕೂ ಬೇಡಿಕೆ ಹೆಚ್ಚಿದೆ. ಹೀಗಾಗಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಹೆಚ್ಚಿನ ರಸಗೊಬ್ಬರ ಪೂರೈಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಕೇಂದ್ರ ರಾಸಾಯನಿಕ ಹಾಗೂ ಆರೋಗ್ಯ ಸಚಿವ ಮನಸುಖ್ ಮಾಂಡವಿ ಅವರನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ, ಕರ್ನಾಟಕಕ್ಕೆ ರಸಗೊಬ್ಬರ ಡಿಎಪಿ 32 ಸಾವಿರ ಮೆಟ್ರಿಕ್ ಟನ್, ಎಂಓಪಿ 10 ಸಾವಿರ ಮೆಟ್ರಿಕ್ ಟನ್ ಕೇಂದ್ರಕ್ಕೆ ಬೇಡಿಕೆಯಿಟ್ಟಿದ್ದು ಒಂದುವಾರದೊಳಗೆ ಡಿಎಪಿ ಪೂರೈಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದರು.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ರಾಜ್ಯದಲ್ಲಿ ಯೂರಿಯಾಗೆ ಯಾವುದೇ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಂದು ತಿಂಗಳಲ್ಲಿ ಕರ್ನಾಟಕದಲ್ಲಿ ವ್ಯಾಕ್ಸಿನೇಷನ್ ಡ್ರೈವ್ 1.5 ಕೋಟಿ ತಲುಪುವ ಗುರಿಹೊಂದಿದ್ದು ಈಗಾಗಲೇ 1.48 ಕೋಟಿ ವ್ಯಾಕ್ಸಿನೇಷನ್ ಆಗಿದೆ. ಕರ್ನಾಟಕದ ವ್ಯಾಕ್ಸಿನೇಷನ್ ಡ್ರೈವ್‌ಗೆ ಕೇಂದ್ರದ ಆರೋಗ್ಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ಸಿಎಂ ಹೇಳಿದರು.

ಸದ್ಯ ರಾಜ್ಯದಲ್ಲಿ 51 ಲಕ್ಷ ಲಸಿಕೆ ಶೇಖರಣೆ ಇದ್ದು, ಇನ್ನೂ ಹೆಚ್ಚಿನ ಲಸಿಕೆ ಅವಶ್ಯಕತೆಯಿದ್ದಲ್ಲಿ ಪೂರೈಸುವುದಾಗಿ ಕೇಂದ್ರ ಸಚಿವರು ಹೇಳಿದ್ದಾರೆ. ಡಿಸೆಂಬರ್ ಅಂತ್ಯದವರೆಗೆ ಮೊದಲ ಡೊಸ್ ಶೇ. 90 ರಷ್ಟು ಜನರಿಗೆ ನೀಡುವ ಗುರಿ ಇದೆ. 2ನೇ ಡೋಸ್ ಅನ್ನು ಶೇ. 70 ರಷ್ಟು ಜನರಿಗೆ ನೀಡೋ ಗುರಿ ಇದೆ ಎಂದರು.

ಅಕ್ಟೋಬರ್ 10ರಂದು ಬೆಂಗಳೂರಿನ ನಿಮ್ಹಾನ್ಸ್ ಕಾನ್ವೋಕೇಷನ್‌ಗೆ ಕೇಂದ್ರ ಆರೋಗ್ಯ ಸಚಿವರು ಭೇಟಿ ನೀಡಲಿದ್ದು, ಆ ವೇಳೆ ಅವರೊಂದಿಗೆ ಇನ್ನಷ್ಟು ಚರ್ಚಿಸುವುದಾಗಿ ಸಿಎಂ ಹೇಳಿದರು.

SCROLL FOR NEXT