ರಾಜ್ಯ

ಹಿಟ್ ಆ್ಯಂಡ್ ರನ್ ಪ್ರಕರಣ: ಹೆಚ್ಎಎಲ್ ನಿವೃತ್ತ ಉದ್ಯೋಗಿ ಬಂಧನ

Manjula VN

ಬೆಂಗಳೂರು: ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಎಎಲ್ ನಿವೃತ್ತ ಉದ್ಯೋಗಿಯೊಬ್ಬರನ್ನು ಕೆ.ಆರ್.ಪುರಂ ಸಂಚಾರಿ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ. 

ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಕಸ್ತೂರಿ ನಗರ 2ನೇ ಮುಖ್ಯರಸ್ತೆಯಲ್ಲಿ ಪಾದಚಾರಿಗೆ ಕಾರು ಡಿಕ್ಕಿಯಾದ ಬಳಿಕ ಗಾಯಾಳುವನ್ನು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದು, ಈ ಸಂಬಂಧ ಕೆ.ಆರ್.ಪುರಂ ಸಂಚಾರಿ ಪೊಲೀಸರು 115/21ರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ಪ್ರಾರಂಭ ಮಾಡಿದ್ದರು. 

ಕೆ.ಆರ್.ಪುರಂ ಸಂಚಾರಿ ಪೊಲೀಸ್ ಠಾಣಾಧಿಕಾರಿ ಮಹಮದ್ ಎಂ.ಎ ರವರ ನೇತೃತ್ವದಲ್ಲಿ, ಆರೋಪಿ ಕಾರು ಯಾವುದು ಎಂಬ ಬಗ್ಗೆ ಸುಮಾರು 50ಕ್ಕೂ ಅಧಿಕ ಸಿಸಿಟಿವಿ ಫೋಟೋಗಳನ್ನು ಪರಿಶೀಲಿಸಲಾಗಿತ್ತು. ಆದರೆ, ಯಾವುದೇ ಸಿಸಿಟಿವಿ ಕ್ಯಾಮೆರಾದಲ್ಲಿ ಕಾರ್ ಸಂಖ್ಯೆ ಲಭ್ಯವಾಗಲಿಲ್ಲ. ಆದರೆ ಅದು ಎರ್ಟಿಗಾ ಮಾದರಿಯ ಕಾರು ಎಂದು ತಿಳಿದುಬಂದಿತ್ತು. ಇದರ ಚಾಲಕನ ಫೋಟೋ ಲಭ್ಯವಾಗಿತ್ತು.

ಚಾಲಕ ಅಪಘಾತದ ನಂತರ ಹಲವು ರಸ್ತೆಗಳಲ್ಲಿ ಸಂಚರಿಸಿ ಒಂದು ಜೆರಾಕ್ಸ್ ಅಂಗಡಿಗೆ ತೆರಳಿ ಅಲ್ಲಿ ಯಾವುದೋ ದಾಖಲಾತಿಗಳನ್ನು ಜೆರಾಕ್ಸ್ ಮಾಡಿಸಿಕೊಂಡ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಅಂಗಡಿಯಲ್ಲಿ ವಿಚಾರಿಸಿದಾಗ ಆರೋಪಿಯ ಭಾವಚಿತ್ರ ಲಭ್ಯವಾಗತ್ತು.

ಭಾವಚಿತ್ರವನ್ನು ಸ್ಥಳೀಯ ಗ್ಯಾಸ್, ಹಾಲು, ಪತ್ರಿಕಾ ವಿತರಕ ಹುಡುಗರು ಮತ್ತು ಇತರ ಸಾರ್ವಜನಿಕರಿಗೆ ತೋರಿಸಿದಾಗ ಆರೋಪಿಯ ಮಾಹಿತಿ ಲಭ್ಯವಾಗಿದೆ.

ಬಳಿಕ ಕಾರು ಹಾಗೂ ಅದರ ಚಾಲಕನ ಮನೆ ಪತ್ತೆಯಾಗಿದ್ದು, ಕಾರಿನ ಮಾಲೀಕರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ ಬಳಿಕ, ಅವರು ನೇರವಾಗಿ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದು ಠಾಣೆಗೆ ಹಾಜರಾಗಿದ್ದಾರೆ. 

ಆರೋಪಿಯನ್ನು ಶ್ರೀಧರ್ ಎಂದು ಗುರುತಿಸಲಾಗಿದೆ. ಎಚ್‍ಎಎಲ್ ನಿವೃತ್ತ ಉದ್ಯೋಗಿ ಎಂದು ತಿಳಿದುಬಂದಿದೆ, ಅಪಘಾತ ದಿನ ವಿಪರೀತ ಮಳೆ ಇದ್ದುದರಿಂದಾಗಿ ಕಾರು ನಿಲ್ಲಿಸದೇ ಹೊರಟು ಹೋಗಿರುವುದಾಗಿ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ  ಕೆ.ಆರ್.ಪುರಂ ಸಂಚಾರಿ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

SCROLL FOR NEXT