ರಾಜ್ಯ

ತಾಯಿಯ ಅಪರೂಪದ ಕೋರಿಕೆ ನೆರವೇರಿಸಿದ ಸಚಿವ ಎಸ್.ಟಿ. ಸೋಮಶೇಖರ್!

Shilpa D

ಬೆಂಗಳೂರು: ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ತಮ್ಮ ತಾಯಿಯವರಾದ ಸೀತಮ್ಮ ತಿಮ್ಮೇಗೌಡ ಅವರ ಹುಟ್ಟುಹಬ್ಬವನ್ನು ಕಳೆದ ವಾರವಷ್ಟೇ ಆಚರಿಸಿದರು.

ಈ ವೇಳೆ ಅವರು ಎಸ್‍ಟಿಎಸ್ ಜೊತೆ ಮಾಜಿ ಸಿಎಂ ಎಸ್. ಎಂ ಕೃಷ್ಣ ಅವರನ್ನು ಭೇಟಿ ಮಾಡಿಸಬೇಕೆಂಬ ಕೋರಿಕೆ ಇಟ್ಟಿದ್ದರು. ಆ ಆಸೆಯನ್ನು ಸಚಿವರು ನೆರವೇರಿಸಿದ್ದಾರೆ.

ಹುಟ್ಟುಹಬ್ಬಕ್ಕೆ ಏನು ಕೊಡಬೇಕು ತಮಗೆ ಎಂದು ಸಚಿವರು ತಮ್ಮ ಮಾತೃಶ್ರೀಯವರಲ್ಲಿ ಕೇಳಿಕೊಂಡಿದ್ದರು. ಆಗ ಅವರು ನನಗೆ ವಯಸ್ಸು 94 ಆಗುತ್ತಿದೆ. ನನಗೆ ಏನೇನು ಅವಶ್ಯಕತೆಗಳಿವೆಯೋ ಅದನ್ನೆಲ್ಲ ನೀನು ಪೂರೈಸಿದ್ದೀಯ. ಅದರೆ ನಾನು ರಾಜಕೀಯ ನಾಯಕರಾದ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ ಕೃಷ್ಣ ಅವರ ಅಭಿಮಾನಿ. ಅವರನ್ನು ಒಮ್ಮೆ ಭೇಟಿ ಮಾಡಬೇಕು ಎಂದು ಆಸೆಯನ್ನು ತೋಡಿಕೊಂಡಿದ್ದಾರೆ. 

ಎಸ್‍ಟಿಎಸ್ ಈ ವಿಷಯವನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿಗಳಾದ ದಿನೇಶ್ ಗೂಳಿಗೌಡ ಅವರಿಗೆ ತಿಳಿಸಿದ್ದರು. ಅವರು ಎಸ್.ಎಂ. ಕೃಷ್ಣ ಅವರ ಬಳಿ ಎಸ್‍ಟಿಎಸ್ ಅವರ ಮಾತೃಶ್ರೀಯವರ ಹುಟ್ಟುಹಬ್ಬದ ಕೋರಿಕೆಯನ್ನು ತಿಳಿಸುತ್ತಾ, ತಮ್ಮ ಮನೆಗೆ ಯಾವಾಗ? ಯಾವ ಸಮಯಕ್ಕೆ ಸಚಿವರ ತಾಯಿಯವರನ್ನು ಕರೆದುಕೊಂಡು ಬರಬೇಕೆಂಬುದನ್ನು ಮನವಿ ಮಾಡಿಕೊಂಡಿದ್ದರು. ಇದನ್ನು ಕೇಳಿದ ಎಸ್.ಎಂ. ಕೃಷ್ಣ ಅವರು ಸಚಿವರ, ಮಾತೃಶ್ರೀಯವರು ನನಗಿಂತ ಹಿರಿಯರು. ಹಾಗಾಗಿ ಅವರು ನಮ್ಮ ಮನೆಗೆ ಬರುವುದು ಉಚಿತವಲ್ಲ. ಹಾಗಾಗಿ ನಾನೇ ಅವರ ಮನೆಗೆ ಬಂದು ಭೇಟಿ ಮಾಡುತ್ತೇನೆ ಎಂದು ಹೇಳಿದ್ದರು. ಬಳಿಕ ಇದೀಗ ಭೇಟಿ ಕೂಡ ಆಗಿದ್ದಾರೆ.

ಕೊಟ್ಟ ಮಾತಿನಂತೆ ಮಂಗಳವಾರ ರಾತ್ರಿ ಎಸ್.ಟಿ ಸೋಮಶೇಖರ್ ಅವರ ಸದಾಶಿವನಗರ ನಿವಾಸಕ್ಕೆ ಎಸ್.ಎಂ ಕೃಷ್ಣ ಭೇಟಿ ಕೊಟ್ಟು ಸೀತಮ್ಮ ಅವರನ್ನು ಭೇಟಿಯಾಗಿ ಕೆಲಕಾಲ ಮಾತನಾಡುವ ಮೂಲಕ ಅವರ ಕೋರಿಕೆಯನ್ನು ಈಡೇರಿಸಿದ್ದಾರೆ. ಇತ್ತ ತಮ್ಮ ತಾಯಿಯ ಕೋರಿಕೆಯನ್ನು ನೆರವೇರಿಸಲು ಕೃಷ್ಣ ಅವರೇ ತಮ್ಮ ಮನೆಗೆ ಆಗಮಿಸಿದ್ದನ್ನು ಕಂಡು ಸೋಮಶೇಖರ್ ಅವರ ಕಣ್ಮನ ತುಂಬಿ ಬಂದಿದೆ.

SCROLL FOR NEXT