ರಾಜ್ಯ

ಉಪಚುನಾವಣೆಗೂ ಮುನ್ನವೇ ಮೀಸಲಾತಿ ವರದಿ ಪಡೆಯಿರಿ: ಸರ್ಕಾರದ ಮೇಲೆ ಸ್ವಾಮೀಜಿ ಒತ್ತಡ

Shilpa D

ಬೆಂಗಳೂರು: ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಉಪ ಚುನಾವಣೆಯ ಮತದಾನಕ್ಕೆ ಮುನ್ನವೇ ಲಿಂಗಾಯತ ಪಂಚಮಸಾಲಿಗೆ 2ಎ ಮೀಸಲಾತಿ ನೀಡುವ ಕುರಿತು ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ತರಿಸಿಕೊಳ್ಳಬೇಕು ಎಂದು ಕೂಡಲಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಅಕ್ಟೋಬರ್ 30ರಂದು ಮತದಾನ ನಡೆಯಲಿದೆ. ಇದಕ್ಕೂ ಮುನ್ನವೇ ಸರ್ಕಾರ ಕ್ರಮ ಕೈಗೊಳ್ಳಬೇಕು. ಇದು ರಾಜಕೀಯ ಒತ್ತಡ ಅಲ್ಲ. ಸಮುದಾಯದ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹಾನಗಲ್ ಕ್ಷೇತ್ರದಲ್ಲಿ ಸುಮಾರು 46 ಸಾವಿರ ಮತ್ತು ಸಿಂದಗಿಯಲ್ಲಿ ಸುಮಾರು 36 ಸಾವಿರ ಪಂಚಮಸಾಲಿ ಸಮುದಾಯದ ಮತದಾರರಿದ್ದಾರೆ. ಹಾನಗಲ್ ನಲ್ಲಿ ನಮ್ಮ ಸಮುದಾಯಕ್ಕೆ ಬಿಜೆಪಿ ಟಿಕೆಟ್ ನೀಡಿಲ್ಲ. ಮುಖ್ಯಮಂತ್ರಿ ಹುದ್ದೆ ಸಹ ಸಮುದಾಯಕ್ಕೆ ನೀಡಿಲ್ಲ. ಹೀಗಾಗಿ ಸಮುದಾಯದಲ್ಲಿ ಅಸಮಾಧಾನವಾಗಿದೆ ಎಂದರು. ಮೀಸಲಾತಿಗಾಗಿ ಹೋರಾಟ ಮುಂದುವರಿಯಲಿದ್ದು, ಈಗಾಗಲೇ ಅ.13ರಿಂದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಆರಂಭಿಸಲಾಗಿದೆ. 2022ರ ಜನವರಿ 14ರವರೆಗೆ ಈ ಅಭಿಯಾನ ನಡೆಯಲಿದೆ ಎಂದರು.

ಮುಖ್ಯಮಂತ್ರಿಗಳು ಮೀಸಲಾತಿ ಸಂಬಂಧ ಭರವಸೆ ನೀಡಿದ್ದರು. ಹೀಗಾಗಿ ಮತ್ತಷ್ಟು ವಿಳಂಬ ಮಾಡುವುದು ಬೇಡ, ಉಪಚುನಾವಣೆ ನಡೆಯುತ್ತಿರುವ ಸಿಂದಗಿ ಮತ್ತು  ಹಾನಗಲ್ ನಲ್ಲಿ ಪಂಚಮಸಾಲಿ ಮತಗಳಿವೆ, ಸಮಿತಿ ವರದಿ ಬರದೇ ಇರುವುದಕ್ಕೆ ಜನರಲ್ಲಿ ಅಸಮಾಧಾನವಿದೆ ಎಂದು ಅವರು ಹೇಳಿದ್ದಾರೆ. 

SCROLL FOR NEXT