ರಾಜ್ಯ

ಸೈಬರ್ ಅಪರಾಧ, ಡ್ರಗ್ ಮಾಫಿಯಾ, ಡಾರ್ಕ್ ವೆಬ್ ಪೊಲೀಸರ ಮುಂದಿರುವ ಹೊಸ ಸವಾಲುಗಳು: ಮುಖ್ಯಮಂತ್ರಿ ಬೊಮ್ಮಾಯಿ

Nagaraja AB

ಬೆಂಗಳೂರು: ಸೈಬರ್ ಅಪರಾಧ, ಡ್ರಗ್ ಮಾಫಿಯಾ, ಡಾರ್ಕ್ ವೆಬ್ ಪೊಲೀಸರ ಮುಂದಿರುವ ಹೊಸ ಸವಾಲುಗಳಾಗಿವೆ ಎಂದು ಸೋಮವಾರ ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೊಸ ತಂತ್ರಜ್ಞಾನ ಮತ್ತು ಆಧುನಿಕ ಸಲಕರಣೆಗಳನ್ನು ಬಳಸಿಕೊಂಡು ಇಂತಹ ಹೊಸ ಅಪರಾಧಗಳನ್ನು ಮಟ್ಟಹಾಕಬೇಕಾಗಿದೆ ಎಂದರು.

ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಪೊಲೀಸರು ದಕ್ಷತೆಗೆ ಪ್ರಸಿದ್ಧಿಯಾಗಿದ್ದು, ದೇಶಾದ್ಯಂತ ಒಳ್ಳೆಯ ಹೆಸರಿದೆ. ಅತ್ಯುತ್ತಮ ದಕ್ಷತೆಯೊಂದಿಗೆ ಇದನ್ನು
ಮುಂದುವರೆಸುವ ಅಗತ್ಯವಿದೆ ಎಂದು ಒತ್ತಾಯಿಸಿದರು. ಕಾನೂನು ಸುವ್ಯವಸ್ಥೆ ಮತ್ತು ಅಪರಾಧಗಳು ಸಂಪೂರ್ಣವಾಗಿ ನಿಯಂತ್ರಣದಲ್ಲಿರಬೇಕು, ನಿಷ್ ಪಕ್ಷಪಾತವಾಗಿ ವಿಚಾರಣೆ ನಡೆಸಬೇಕು ಎಂದು ಹೇಳಿದ ಮುಖ್ಯಮಂತ್ರಿ, ಜನ ಸ್ನೇಹಿ ಪೊಲೀಸ್ ಹಾಗೂ ಅಪರಾಧ ವ್ಯವಸ್ಥೆ ಸುಧಾರಣೆಯ ಅಗತ್ಯವಿದೆ ಎಂದು ಒತ್ತಿ ಹೇಳಿದರು. 

ಪ್ರತಿನಿತ್ಯ ಕೇಸ್ ಗಳ ಮೇಲ್ವಿಚಾರಣೆಗಾಗಿ ಡಿಜಿ ಮತ್ತು ಎಲ್ಲಾ ಎಸ್ ಪಿ ಕಚೇರಿಗಳಲ್ಲಿ ಡ್ಯಾಶ್ ಬೋರ್ಡ್ ಇರಬೇಕು, ಚಾರ್ಜ್ ಶೀಟ್ ನಲ್ಲಿರುವ ಆರೋಪಿಗಳಿಗೆ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು, ಪ್ರತಿಯೊಂದು ಪ್ರಕರಣವನ್ನು ವಿಶ್ಲೇಷಿಸಬೇಕು, ನ್ಯಾಯಾಲಯದ ಅವಲೋಕನಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತನಿಖೆಯಲ್ಲಿ ವಿಷಯಗಳನ್ನು ಸರಿಪಡಿಸಲಾಗಿದೆಯೇ ಎಂಬುದನ್ನು ನೋಡಬೇಕು ಎಂದರು.

ಯಾವುದೇ ರೀತಿಯ  ಏಜೆಂಟ್ ಅಥವಾ ಕ್ರಿಮಿನಲ್ ಗಳೊಂದಿಗೆ ಸಂಬಂಧವಿರಬಾರದು, ಎಲ್ಲಾ ಕ್ರಮಗಳೊಂದಿಗೆ ಗ್ಯಾಂಬ್ಲಿಂಗ್ ಮಟ್ಟ ಹಾಕಬೇಕು, ಅಕ್ರಮ ಮರಳು ಗಣಿಗಾರಿಕೆ ಅಥವಾ ಮಾರಾಟದೊಂದಿಗೆ ಯಾವುದೇ ರೀತಿಯ
 ಸಂಬಂಧ ಹೊಂದಬಾರದು ಎಂದು ಅವರು ತಿಳಿಸಿದರು. 

ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸುಧಾರಿಸಲು, ಕಮಾಂಡ್ ಸೆಂಟರ್ ಬರಲಿದೆ, ಆರು ವಿಧಿವಿಜ್ಞಾನ ಪ್ರಯೋಗಾಲಯಗಳಿಗೆ ಅನುಮೋದನೆ ನೀಡಲಾಗಿದೆ. ನೂತನ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಬೆಟಾಲಿಯನ್ ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಜೈಲು ಮೂಲಸೌಕರ್ಯವನ್ನು ಸುಧಾರಿಸಲಾಗುತ್ತಿದೆ, ಅಗ್ನಿಶಾಮಕ ದಳದ ಉಪಕರಣಗಳನ್ನು ಆಧುನೀಕರಿಸಲಾಗುತ್ತಿದೆ ಮತ್ತು ಕರಾವಳಿ ಪೊಲೀಸರಿಗೆ ಹೈಸ್ಪೀಡ್ ಬೋಟ್‌ಗಳಂತಹ ಸಾಧನಗಳನ್ನು ಒದಗಿಸಲಾಗುತ್ತಿದೆ" ಎಂದು ಅವರು ಹೇಳಿದರು.

SCROLL FOR NEXT