ಬೆಂಗಳೂರು: ಮೂರು ವರ್ಷಗಳಿಂದ ಪ್ರೀತಿಸಿದ ಯುವತಿ ಕೊನೆಗೆ ಮದುವೆಯಾಗುವುದಕ್ಕೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕನೋರ್ವ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಆರ್.ಆರ್ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಮಂಡ್ಯ ಮೂಲದ 31 ವರ್ಷದ ಸಿದ್ದರಾಮ ಆತ್ಮಹತ್ಯೆಗೆ ಶರಣಾದ ಭಗ್ನ ಪ್ರೇಮಿ. ಮೃತನು ಬೆಂಗಳೂರಿನಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡಿಕೊಂಡಿದ್ದನು.
ಕಳೆದ ಮೂರು ವರ್ಷಗಳಿಂದ ಸುಧಾ(ಹೆಸರು ಬದಲಾಯಿಸಲಾಗಿದೆ) ಹಾಗೂ ಸಿದ್ದರಾಮ ಪರಸ್ಪರ ಪ್ರೀತಿಸ್ತಿದ್ದರು. ಆದರೆ, ನಿನ್ನೆ ಇಬ್ಬರ ನಡುವೆ ಜಗಳವಾಗಿತ್ತು.
ಈ ವೇಳೆ ಮದುವೆಯಾಗಲು ಯುವತಿ ಹಿಂದೇಟು ಹಾಕಿದ್ದಳಂತೆ. ಅಲ್ಲದೇ, ಆಕೆ ಇನ್ನೋರ್ವನನ್ನ ಪ್ರೀತಿಸಿದ್ದಳು ಎಂಬ ಮಾಹಿತಿ ಇದೆ. ಆದ್ದರಿಂದ ಸಿದ್ದರಾಮ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಅಣ್ಣ ಸಂತೋಷ್ ಹೇಳಿಕೆ ನೀಡಿದ್ದಾರೆ.