ಶಿವಮೊಗ್ಗ: ಶಿವಮೊಗ್ಗ ಕಲ್ಲಗಂಗೂರು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭಾರಿ ಸ್ಪೋಟದಲ್ಲಿ ಮೃತಪಟ್ಟಿದ್ದ 6ನೇ ವ್ಯಕ್ತಿಯ ಗುರುತು ಪತ್ತೆಯಾಗಿದೆ.
ಕಲ್ಲಗಂಗೂರು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದರು. ಐವರ ಗುರುತು ಪತ್ತೆಯಾಗಿ ಮೃತದೇಹಗಳನ್ನು ಹಸ್ತಾಂತರ ಮಾಡಲಾಗಿತ್ತು. ಆದರೆ ಆರನೆ ವ್ಯಕ್ತಿಯ ದೇಹ ಸಂಪೂರ್ಣ ಛಿದ್ರವಾಗಿದ್ದ ಹಿನ್ನೆಲೆ ಗುರುತು ಪತ್ತೆ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಮೂಕ ಪ್ರಾಣಿಗಳ ಮಾರಣಹೋಮ: 38-40ಕ್ಕೂ ಹೆಚ್ಚು ಬೀದಿ ನಾಯಿಗಳ ಜೀವಂತ ಸಮಾಧಿ, ಪ್ರಕರಣ ದಾಖಲು
ಇದೀಗ ಆತನ ಗುರುತು ಪತ್ತೆಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತನನ್ನು ಭದ್ರಾವತಿಯ ಕೆ.ಹೆಚ್.ನಗರದ ಆಟೋ ಚಾಲಕ ಶಶಿ ಅಲಿಯಾಸ್ ದೇವೇಂದ್ರಪ್ಪ (32) ಎಂದು ಗುರ್ತಿಸಲಾಗಿದೆ.
ಕಲ್ಲು ಕ್ವಾರಿ ಸ್ಫೋಟದ ನಂತರದಲ್ಲಿ ಛಿದ್ರವಾಗಿದ್ದ ದೇಹದ ಭಾಗಗಳನ್ನು ವಶಕ್ಕೆ ಪಡೆದ ಪೊಲೀಸರು ಅವುಗಳನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿದ್ದರು. ಬೆಂಗಳೂರಿನ ಮಡಿವಾಳದಲ್ಲಿರುವ ಎಫ್ಎಸ್ಎಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದ, ಪರೀಕ್ಷಾ ವರದಿಯು ಸೆಪ್ಟೆಂಬರ್ 10ರಂದು ಬಂದಿದೆ.
ಕಳೆದ 2021ರ ಜನವರಿ 21ರ ರಾತ್ರಿ 10.20ರ ಹೊತ್ತಿಗೆ ಕಲ್ಲಗಂಗೂರು ಗ್ರಾಮದ ಸರ್ವೇ ನಂಬರ್ 2ರಲ್ಲಿರುವ ಎಸ್.ಎಸ್.ಕ್ರಷರ್ ಬಳಿ ಭಾರಿ ಪ್ರಮಾಣದ ಸ್ಪೋಟಕ ಸ್ಪೋಟಗೊಂಡಿತ್ತು. ಈ ಘಟನೆಯಲ್ಲಿ ಆರು ಮಂದಿ ಮೃತರಾಗಿದ್ದರು. ಸ್ಪೋಟದ ತೀವ್ರತೆ ನೂರಾರು ಕಿ.ಮೀ ವರೆಗೆ ವ್ಯಾಪಿಸಿತ್ತು. ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿತ್ತು.
ಆಂಧ್ರದಿಂದ ವಾಹನದಲ್ಲಿ ಸ್ಪೋಟಕ ತುಂಬಿಕೊಂಡು ತರಲಾಗಿತ್ತು. ಕ್ರಷರ್ ಬಳಿ ವಾಹನ ನಿಲ್ಲಿಸಿದ್ದಾಗ ಸ್ಪೋಟ ಸಂಭವಿಸಿದ್ದು, ಘಟನೆ ಸಂಬಂಧ ಕ್ವಾರಿ ಮಾಲೀಕರು, ಕ್ವಾರಿಗೆ ಜಾಗ ನೀಡಿದ ಮಾಲೀಕ, ಸ್ಪೋಟಕ ಪೂರೈಕೆ ಮಾಡಿದಾತ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಈ ಘಟನೆ ರಾಜಕೀಯ ಕೆಸರೆರಚಾಟಕ್ಕೂ ಸಾಕ್ಷಿಯಾಗಿತ್ತು