ರಾಜ್ಯ

ಅತ್ಯಾಚಾರಿಗಳ ಅಂಗಾಂಗ ಕತ್ತರಿಸುವ ಕಾನೂನನ್ನು ಭಾರತದಲ್ಲಿ ತರಲು ಸಾಧ್ಯವಿಲ್ಲ: ಸಚಿವ ಮಾಧುಸ್ವಾಮಿ

Lingaraj Badiger

ಬೆಂಗಳೂರು: ಅತ್ಯಾಚಾರಿಗಳ ಅಂಗಾಂಗಗಳನ್ನು ಕತ್ತರಿಸುವ ಕಾನೂನನ್ನು ಭಾರತದಲ್ಲಿ ತರಲು ಸಾಧ್ಯವಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಶುಕ್ರವಾರ ಹೇಳಿದ್ದಾರೆ.

ಮೇಲ್ಮನೆಯಲ್ಲಿ ನಿಯಮ 68 ರ ಮೇರೆಗೆ ಸಾರ್ವಜನಿಕ ಮಹತ್ವ ವಿಷಯದ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವ ಜೆ‌.ಸಿ ಮಾಧುಸ್ವಾಮಿ, ಸಮಾಜ ಎಷ್ಟೇ ನಾಗರಿಕವಾಗಿ ಮುಂದುವರೆದಿದ್ದರೂ ಇಂತಹ ಕೃತ್ಯಗಳು ನಡೆಯುತ್ತಿರುತ್ತದೆ. ಮನಸಿನಲ್ಲುಂಟಾಗುವ ಭಾವನೆಗಳು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ ಇಂತಹ ಕೃತ್ಯಗಳು ನಡೆಯುತ್ತಿರುತ್ತವೆ ಎಂದರು.

ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಇರುವವರು ಮನುಷ್ಯರೇ ಅಲ್ಲ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಈ ಬಗ್ಗೆ ಶಿಕ್ಷಣ ಕೊಡಬೇಕಿದೆ. ಅದಕ್ಕಾಗಿ ಶಾಲೆಗಳಲ್ಲಿ ನೈತಿಕ ಶಿಕ್ಷಣ ಕೊಡಬೇಕು ಎನ್ನುವ ಬಗ್ಗೆ ಶಿಕ್ಷಣ ಸಚಿವರ ಜೊತೆ ಚರ್ಚಿಸಲಾಗುವುದು. ಸದಸ್ಯೆ ಭಾರತಿ ಶೆಟ್ಟಿ ಹೇಳಿದಂತೆ ಪ್ರಜಾಪ್ರಭುತ್ವವಿರುವ ರಾಷ್ಟ್ರದಲ್ಲಿ ನಮ್ಮ ದೇಶದಲ್ಲಿ ಅತ್ಯಚಾರಿಗಳ ಕೈಕಾಲು ಅಂಗಗಳನ್ನು ಕತ್ತರಿಸುವ ಕಾನೂನನ್ನು ತರಲು ಸಾಧ್ಯವಿಲ್ಲ ಎಂದರು.

ಅತ್ಯಾಚಾರಿಗಳನ್ನು ಕತ್ತಲೆ ಕೋಣೆಗೆ ಕಳಿಸುವುದು ಬಿಡುವುದು ನ್ಯಾಯಮೂರ್ತಿಗಳಿಗೆ ಸೇರಿದ್ದಾಗಿದೆ, ಶಿಕ್ಷೆ ಕೊಡುವ ಅಧಿಕಾರ ಇರುವುದು ನ್ಯಾಯಾಲಯಕ್ಕೆ ಮಾತ್ರ. ಇಂತಹದ್ದೇ ಶಿಕ್ಷೆ ಕೊಡಿ ಕ್ರಮಜರುಗಿಸಿ ಎಂದು ನಾವು ಹೇಳಲು ಸಾಧ್ಯವಿಲ್ಲ, ಈ ಕುರಿತು ನಮ್ಮ ಕೈಯಲ್ಲಿ ಕಾನೂನು ತರಲು ಸಾಧ್ಯವಿಲ್ಲ. ಐಪಿಸಿ, ಸಿಆರ್ ಪಿಸಿ, ಎವಿಡೆನ್ಸ್ ಆಕ್ಟ್ ಅಮೆಂಡ್ಮೆಂಟ್ ತರುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ, ಹಾಗಾಗಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ತರುವ ಕುರಿತು ನಮ್ಮ ಕಾನೂನು ಆಯೋಗದೊಂದಿಗೆ ಚರ್ಚಿಸಿ ನಿಯೋಗದೊಂದಿಗೆ ಕೇಂದ್ರಕ್ಕೆ ತಲುಪಿಸಲಾಗುತ್ತದೆ. ಸಂಸತ್ತಿನಲ್ಲಿ ಇದು ಚರ್ಚಿಸಿ ಕಠಿಣ ಕಾನೂನಾಗಬೇಕು. ಅತ್ಯಾಚಾರ ದೌರ್ಜನ್ಯ ತಡೆಗೆ ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ರಾಜ್ಯದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಅತ್ಯಾಚಾರಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸಲು ಶಕ್ತಿ ಮೀರಿ ಕೆಲಸ ಮಾಡುವುದಾಗಿ ಮಾಧುಸ್ವಾಮಿ ಹೇಳಿದರು.

SCROLL FOR NEXT