ಬೆಂಗಳೂರು: ನಮ್ಮ ಶಾಸಕರೇ ಡಿಸಿಸಿ ಬ್ಯಾಂಕ್ಗಳಲ್ಲಿ 245 ಕೋಟಿ ಸಾಲ ಪಡೆದು ಒಂದೇ ಒಂದು ರೂಪಾಯಿಯೂ ಕಟ್ಟಿಲ್ಲ ಎಂದು ವಿಧಾನ ಪರಿಷತ್ ಕಲಾಪದ ವೇಳೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅಳಲು ತೋಡಿಕೊಂಡಿದ್ದಾರೆ.
ಸಹಕಾರ ಇಲಾಖೆ ವ್ಯಾಪ್ತಿಯ ಸಕ್ಕರೆ ಕಾರ್ಖಾನೆಗಳನ್ನ ಉಳಿಸಿ. ಈ ಬಗ್ಗೆ ಆದಷ್ಟು ಬೇಗ ನಿರ್ಣಯ ಮಾಡುವಂತೆ ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಒತ್ತಾಯಿಸಿದರು.
ಎಸ್.ಆರ್.ಪಾಟೀಲ್ ಪ್ರಸ್ತಾಪಕ್ಕೆ ಸೋಮಶೇಖರ್ ಸ್ಪಷ್ಟನೆ ನೀಡುತ್ತಾ, ರಾಜ್ಯ ಸಹಕಾರ ಇಲಾಖೆ ಸದ್ಯ ಬಹಳ ಕಷ್ಟದಲ್ಲಿದೆ. ಸಹಕಾರಿ ಬ್ಯಾಂಕ್ಗಳಲ್ಲಿ ಪಡೆದ ಸಾಲ ಮರುಪಾವತಿಸುತ್ತಿಲ್ಲ. ಸಕ್ಕರೆ ಕಾರ್ಖಾನೆ ಮಾಲೀಕರು ಸಾಲ ಮರುಪಾವತಿ ಮಾಡ್ತಿಲ್ಲ. ಯಾರು ಪಾವತಿ ಮಾಡುತ್ತಿಲ್ಲ ಎಂದು ಹೇಳಲು ಹೋಗಲ್ಲ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಶಾಸಕ ರಮೇಶ್ ಜಾರಕಿಹೊಳಿಯ ಹೆಸರನ್ನು ಪ್ರಸ್ತಾಪಿಸದೆಯೇ, ಶಾಸಕರ ಮಾಲೀಕತ್ವದ ಸಕ್ಕರೆ ಕಾರ್ಖಾನೆಯೊಂದು ಸುಮಾರು 250 ಕೋಟಿ ರೂ.ಗಳಷ್ಟು ಸಾಲವನ್ನು ಅಪೆಕ್ಸ್ ಬ್ಯಾಂಕ್, ಬೆಳಗಾವಿ ಮತ್ತು ಕಾರವಾರ ಡಿಸಿಸಿ ಬ್ಯಾಂಕುಗಳಿಂದ ಪಡೆದು ಬಾಕಿ ಉಳಿಸಿಕೊಂಡಿದೆ ಎಂದು ಸೋಮಶೇಖರ್ ಹೇಳಿದ್ದರು. ಈಗ ಈ ಶಾಸಕ ರಮೇಶ್ ಜಾರಕಿಹೊಳಿ ಎಂದು ತಿಳಿದು ಬಂದಿದೆ.
ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಾಲವನ್ನು ಪಡೆದಿದ್ದಾರೆ. ಸಹಕಾರಿ ಬ್ಯಾಂಕ್ಗಳಲ್ಲಿ 100 ಕೋಟಿಗೂ ಹೆಚ್ಚು ಸಾಲ ಪಡೆದಿದ್ದಾರೆ. ಅರ್ಧದಷ್ಟು ಸಾಲವನ್ನು ಕೂಡ ಮರುಪಾವತಿ ಮಾಡೇ ಇಲ್ಲ. ಎಸ್ ಆರ್ ಪಾಟೀಲ್ರಂತಹ ಕೆಲವರು ಮಾತ್ರ ಸಾಲ ತೀರಿಸಿದ್ದಾರಷ್ಟೇ. ಆದರೂ ಸಹಕಾರ ಇಲಾಖೆ ಸಕ್ಕರೆ ಕಾರ್ಖಾನೆ ರಕ್ಷಣೆಗೆ ನಿಂತಿದೆ ಎಂದು ಪರಿಷತ್ನಲ್ಲಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ವಿಷಾದ ವ್ಯಕ್ತಪಡಿಸಿದರು.