ರಾಜ್ಯ

'ಮೋದಿ ಸರ್ಕಾರ ಬಡ ಖಾದಿ ಕಾರ್ಮಿಕರ ಜೇಬಿನಿಂದ ಹಣ ಕಿತ್ತು ತಮ್ಮ ನೆಚ್ಚಿನ ಜನರ ಜೇಬನ್ನು ತುಂಬಿಸುತ್ತಿದೆ': ರಾಹುಲ್ ಗಾಂಧಿ

Sumana Upadhyaya

ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಖಾದಿ ಧ್ವಜ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ (ಕೆಕೆಜಿಎಸ್‌ಎಸ್) ಪ್ರತಿಭಟನಾ ನಿರತ ಕಾರ್ಯಕರ್ತರಿಗೆ ಬೆಂಬಲ ವ್ಯಕ್ತಪಡಿಸಿದರು. 

ಧ್ವಜ ಸಂಹಿತೆಯನ್ನು ತಿದ್ದುಪಡಿ ಮಾಡುವ ಮತ್ತು ಪಾಲಿಯೆಸ್ಟರ್ ಧ್ವಜಗಳಿಗೆ ಅನುಮತಿ ನೀಡುವ ಕೇಂದ್ರದ ಕ್ರಮದ ನಂತರ, ಭಾರತದ ಏಕೈಕ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್-ಪ್ರಮಾಣೀಕೃತ ಧ್ವಜ ತಯಾರಿಕೆ ಘಟಕವಾದ ಕೆಕೆಜಿಎಸ್ಎಸ್ ನ ಕಾರ್ಮಿಕರು ಮತ್ತು ಸದಸ್ಯರು ನಗರದಲ್ಲಿ ಈ ಕ್ರಮದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ತಮ್ಮ ಭೇಟಿಯ ಸಮಯದಲ್ಲಿ, ರಾಹುಲ್ ಗಾಂಧಿ ಧ್ವಜ ಪ್ರಕ್ರಿಯೆಯನ್ನು ತಿಳಿದುಕೊಂಡು ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಾದಿ ಮತ್ತು ಚರಕ ಮಹಾತ್ಮ ಗಾಂಧಿ ಮತ್ತು ಭಾರತವನ್ನು ಪ್ರತಿನಿಧಿಸುತ್ತದೆ. ಆದರೆ ಬಿಜೆಪಿಯು ದೇಶದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದ ಉದ್ಯಮಗಳನ್ನು ಕಿತ್ತುಹಾಕುತ್ತಿದೆ. ಎಲ್ಲವನ್ನೂ ತನ್ನ ಒಲವು ಹೊಂದಿರುವ ಜನರಿಂದಲೇ ಉತ್ಪಾದಿಸಬೇಕು ಎಂದು ನಿರೀಕ್ಷಿಸುತ್ತದೆ. ಈ ಜನರ (ಖಾದಿ ಧ್ವಜ ನೇಕಾರರು) ಜೇಬಿನಿಂದ ಹಣವನ್ನು ತೆಗೆದುಕೊಂಡು ಅವರ ನೆಚ್ಚಿನ ಜನರ ಜೇಬಿಗೆ ಹಾಕುವುದು ಬಿಜೆಪಿಯ ಆಲೋಚನೆಯಾಗಿದೆ. ಅದಕ್ಕಾಗಿಯೇ ಅವರು ಧ್ವಜ ನಿಯಮಗಳನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಕಳೆದ ತಿಂಗಳು ಘಟಕಕ್ಕೆ ಭೇಟಿ ನೀಡಿದ್ದರು.

ಕೇಂದ್ರ ಸಚಿವರ ಪುತ್ರನ ಪಾಲುದಾರರಾಗಿರುವ ಗುರಜತ್‌ನ ಸೂರತ್‌ನಲ್ಲಿರುವ ಒಂದೆರಡು ಕಾರ್ಖಾನೆಗಳಲ್ಲಿ ಪಾಲಿಯೆಸ್ಟರ್ ಧ್ವಜಗಳನ್ನು ತಯಾರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ನೋಟು ಅಮಾನ್ಯೀಕರಣ ಮತ್ತು ಕೃಷಿ ಮಸೂದೆಗಳು ಸೇರಿದಂತೆ ದೇಶದ ಬಿಜೆಪಿ ಸರ್ಕಾರದ ನೀತಿಗಳನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಇವುಗಳು ದೊಡ್ಡ ಕೈಗಾರಿಕೋದ್ಯಮಿಗಳ ಪರವಾಗಿವೆ. ಸರ್ಕಾರವು ಬಡವರನ್ನು ಲೂಟಿ ಮಾಡುತ್ತಿದೆ ಎಂದರು.

SCROLL FOR NEXT