ರಾಜ್ಯ

ಕಳೆದ 3 ದಿನಗಳಲ್ಲಿ ಬಿಬಿಎಂಪಿಗೆ 50,000 ದೋಷಯುಕ್ತ ಧ್ವಜ  ಹಿಂದಿರುಗಿಸಿದ ಜನ

Lingaraj Badiger

ಬೆಂಗಳೂರು: ಈ ವರ್ಷ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 'ಹರ್ ಘರ್ ತಿರಂಗ' ಅಭಿಯಾನವನ್ನು ದೊಡ್ಡ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದರೂ, ಬೆಂಗಳೂರಿನ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ದೋಷಯುಕ್ತ ಧ್ವಜಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಹಿಂದಿರುಗಿಸುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಕಳೆದ ಮೂರು ದಿನಗಳಲ್ಲಿ 50,000 ದೋಷಯುಕ್ತ ಧ್ವಜಗಳನ್ನು ಬಿಬಿಎಂಪಿಗೆ ಹಿಂತಿರುಗಿಸಲಾಗಿದೆ.

ಬಿಬಿಎಂಪಿ ಕಚೇರಿಗಳಲ್ಲಿ ಧ್ವಜ ವಿನಿಮಯ
ನಾಗರಿಕರು ಧ್ವಜಗಳಲ್ಲಿ ಯಾವುದೇ ದೋಷ ಕಂಡುಬಂದಲ್ಲಿ, ಅವರು ತಾವು ಖರೀದಿಸಿದ ಬಿಬಿಎಂಪಿ ಕೌಂಟರ್‌ಗಳಿಗೆ ಹೋಗಬೇಕಾಗಿಲ್ಲ. ಬದಲಾಗಿ ಅವುಗಳನ್ನು ಹಿಂದಿರುಗಿಸಲು ಯಾವುದೇ ಬಿಬಿಎಂಪಿ ವಾರ್ಡ್ ಕಚೇರಿಗಳಿಗೆ ಭೇಟಿ ನೀಡಿ, ವಿನಿಮಯ ಮಾಡಿಕೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಶನಿವಾರ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಖರೀದಿಸಿದ 10 ಲಕ್ಷ ಧ್ವಜಗಳನ್ನು ಬಿಬಿಎಂಪಿ ಮಾರಾಟ ಮಾಡುತ್ತಿದೆ. ಅದರಲ್ಲಿ ಕೆಲವು ಧ್ವಜಗಳಲ್ಲಿ ಮಾತ್ರ ನ್ಯೂನತೆಗಳಿವೆ ಎಂದು ವರದಿಯಾಗಿದೆ. ಆದರೆ, ಅವುಗಳ ಸಂಖ್ಯೆ ಮಾತ್ರ ಹೆಚ್ಚುತ್ತಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ಹಾಗೂ 'ಆಜಾದಿ ಕಾ ಅಮೃತ್ ಮಹೋತ್ಸವ'ದ ಪ್ರಭಾರಿ ನೋಡಲ್ ಅಧಿಕಾರಿಯಾಗಿರುವ ರಂಗಪ್ಪ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ದೋಷಗಳೆಂದರೆ ಅಶೋಕ ಚಕ್ರದ ತಪ್ಪಾದ ಗಾತ್ರ, ಅದು ದುಂಡಗೆ ಬದಲಾಗಿ ಅಂಡಾಕಾರವಾಗಿದೆ. ತ್ರಿವರ್ಣ ಧ್ವಜದ ಅಗಲ ಮತ್ತು ಗಾತ್ರವು ಏಕರೂಪವಾಗಿಲ್ಲ, ಚರಖಾ(ನೂಲುವ ಚಕ್ರ) ಎರಡು ಬಾರಿ ಮುದ್ರಿತವಾಗಿದೆ, ಧ್ವಜದ ಗಾತ್ರವು ಧ್ವಜ ಸಂಕೇತದ ಪ್ರಕಾರವಾಗಿಲ್ಲ ಅಥವಾ ಧ್ವಜದ ಮೇಲಿನ ಬಣ್ಣಗಳು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.

SCROLL FOR NEXT