ರಾಜ್ಯ

ನಿರಂತರ ಮಳೆಯಿಂದಾಗಿ ಬೆಂಗಳೂರಿನ ಮೂರು ಪ್ರತ್ಯೇಕ ಪ್ರದೇಶಗಳಲ್ಲಿ ಗೋಡೆ ಕುಸಿತ

Ramyashree GN

ಬೆಂಗಳೂರು: ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧೆಡೆ ಗೋಡೆ ಕುಸಿತದ ಘಟನೆಗಳು ವರದಿಯಾಗಿವೆ. ಶನಿವಾರ ಮುಂಜಾನೆ 4 ಗಂಟೆಗೆ ಅವೆನ್ಯೂ ರಸ್ತೆ ಬಳಿಯ ಮಾಮುಲ್‌ಪೇಟೆಯಲ್ಲಿ ಶಿಥಿಲಗೊಂಡ ಕಟ್ಟಡವೊಂದು ಕುಸಿದು ಬಿದ್ದಿದೆ. ಸರಿಯಾಗಿ ನಿರ್ವಹಣೆ ಮಾಡದಿರುವುದೇ ಕುಸಿತಕ್ಕೆ ಕಾರಣ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಇದೇ ಕಾರಣಕ್ಕೆ ಕೆ.ಆರ್. ಮಾಕುಕಟ್ಟೆಯ ಸಂಸ್ಕರಣಾ ಘಟಕದ ಗೋಡೆ ಕುಸಿತವಾಗಿದೆ. ಚಿಕ್ಕಪೇಟೆಯ ಯರಪ್ಪಾ ರೆಡ್ಡಿ ಬಡಾವಣೆಯ ವಾರ್ಡ್ ನಂಬರ್ 143ರಲ್ಲಿ ಕೂಡ ಗೋಡೆ ಕುಸಿತವಾಗಿದೆ. ಈ ಮೂರು ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಕೆ.ಆರ್. ಮಾರುಕಟ್ಟೆಯಲ್ಲಿನ ತ್ಯಾಜ್ಯ ಸಂಸ್ಕರಣಾ ಘಟಕ ಶಿಥಿಲಗೊಂಡಿದ್ದು, ತುರ್ತು ದುರಸ್ತಿಯ ಅಗತ್ಯವಿದೆ. ಬಯೋಗ್ಯಾಸ್ ಘಟಕ ಕೆಲಸ ಮಾಡದೇ ಶೌಚಾಲಯದಿಂದ ಲೀಚೆಟ್ ಹೊರ ಹರಿಯುತ್ತಿದೆ. ಸ್ಥಳದಲ್ಲಿ ಸೂಕ್ತ ಸೌಲಭ್ಯ ಇಲ್ಲದ ಕಾರಣ ಜನರು ತ್ಯಾಜ್ಯ ಸುರಿಯುವ ಪರಿಪಾಠವನ್ನು ಮುಂದುವರಿಸಿದ್ದಾರೆ ಎಂದು ಗಿರಿನಾಥ್ ತಿಳಿಸಿದ್ದಾರೆ.

ತಳ್ಳುವ ಗಾಡಿಗಳು, ತ್ಯಾಜ್ಯ ಸಂಗ್ರಹಣೆ ಸೌಲಭ್ಯಗಳು ಮತ್ತು ಹೊಸ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಲು ಸ್ಮಾರ್ಟ್ ಸಿಟಿ ಲಿಮಿಟೆಡ್‌ನೊಂದಿಗೆ ಕೆಲಸ ಮಾಡುತ್ತಿದ್ದೇವೆ. ಜೈವಿಕ ಅನಿಲ ಘಟಕವನ್ನು ಕೆ.ಆರ್. ಮಾರ್ಕೆಟ್‌ನಿಂದ ಬೇರೆಡೆಗೆ ಸ್ಥಳಾಂತರಿಸುವ ನಿಟ್ಟಿನಲ್ಲಿಯೂ ಪೌರಕಾರ್ಮಿಕರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಹೇಳಿದರು.

ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿ ಆಚರಣೆಯ ವ್ಯವಸ್ಥೆಗಳ ಕುರಿತು ಕೇಳಿದಾಗ, ಈ ವಿಚಾರವನ್ನು ತಜ್ಞರೊಂದಿಗೆ ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

ಕಳೆದ ವರ್ಷದಂತೆಯೇ ಪ್ರತಿ ವಾರ್ಡ್‌ಗೆ ಒಂದು ವಿಗ್ರಹಕ್ಕೆ ಅನುಮತಿ ನೀಡಲಾಗುತ್ತದೆಯೇ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಆದಾಗ್ಯೂ, ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ವಿಷಕಾರಿ ಬಣ್ಣಗಳಿಂದ ತಯಾರಿಸಿದ ವಿಗ್ರಹಗಳನ್ನು ನಿಷೇಧಿಸುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು. ಮನೆಯಲ್ಲಿ ಮೊಬೈಲ್ ಇಮ್ಮರ್ಶನ್ ಸೌಲಭ್ಯಗಳು ಮತ್ತು ಬಕೆಟ್‌ಗಳನ್ನು ಬಳಸಿಕೊಂಡು ವಿಗ್ರಹಗಳ ವಿಸರ್ಜನೆ ಮಾರ್ಗಸೂಚಿಗಳನ್ನು ಸಹ ಅನುಸರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

SCROLL FOR NEXT