ರಾಜ್ಯ

ಬಿಜೆಪಿ ಎಂಬ ಗಾಂಪರ ಗುಂಪು ತೆಗೆದುಕೊಳ್ಳುವ ನಿರ್ಧಾರಗಳಿಗೆ ರಾಷ್ಟ್ರಧ್ವಜದ ಘನತೆ ಮಣ್ಣು ಪಾಲು: ಕಾಂಗ್ರೆಸ್

Ramyashree GN

ಬೆಂಗಳೂರು: ದೇಶಭಕ್ತಿಯನ್ನು ವ್ಯಾಪಾರದ ಸರಕು ಎಂದುಕೊಂಡಿರುವ ಬಿಜೆಪಿ ಎಂಬ ಗಾಂಪರ ಗುಂಪು ತೆಗೆದುಕೊಳ್ಳುವ ನಿರ್ಧಾರಗಳಿಗೆ ರಾಷ್ಟ್ರಧ್ವಜದ ಘನತೆ ಮಣ್ಣು ಪಾಲಾಗಿದೆ. ಲಕ್ಷಾಂತರ ದೋಷಪೂರಿತ ರಾಷ್ಟ್ರಧ್ವಜಗಳನ್ನು ವಿತರಿಸಿದವರಿಗೆ ಯಾವ ಶಿಕ್ಷೆ? ಕೇವಲ ವ್ಯಾಪಾರಕ್ಕಾಗಿ ಗೌರವದ ಸಂಕೇತವಾದ ಧ್ವಜಕ್ಕೆ ಅಪಚಾರ ಎಸಗುತ್ತಿರುವುದು ಸಹಿಸಲಾಸಾದ್ಯ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಗ್ರಾಹಕರು ಈ ಬಾರಿ ಖರೀದಿಸಿರುವ ಧ್ವಜಗಳಲ್ಲಿ ದೋಷಗಳೆಂದರೆ, ಅಶೋಕ ಚಕ್ರದ ತಪ್ಪಾದ ಗಾತ್ರ, ಅದು ದುಂಡಗೆ ಬದಲಾಗಿ ಅಂಡಾಕಾರವಾಗಿದೆ. ತ್ರಿವರ್ಣ ಧ್ವಜದ ಅಗಲ ಮತ್ತು ಗಾತ್ರವು ಏಕರೂಪವಾಗಿಲ್ಲ, ಚರಖಾ(ನೂಲುವ ಚಕ್ರ) ಎರಡು ಬಾರಿ ಮುದ್ರಿತವಾಗಿದೆ, ಧ್ವಜದ ಗಾತ್ರವು ಧ್ವಜ ಸಂಕೇತದ ಪ್ರಕಾರವಾಗಿಲ್ಲ ಅಥವಾ ಧ್ವಜದ ಮೇಲಿನ ಬಣ್ಣಗಳು ಸೂಕ್ತವಾಗಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ರಾಷ್ಟ್ರ ಧ್ವಜವನ್ನು ಕರ್ಚಿಫ್‌ನಂತೆ ಭಾವಿಸಿದೆ. ಸ್ವಾಭಿಮಾನದ ಸಂಕೇತವಾದ ತಿರಂಗಕ್ಕೆ ಅದರದ್ದೇ ಗೌರವ, ನೀತಿ, ನಿಯಮಗಳಿವೆ. ಜನಸಾಮಾನ್ಯರು ದೋಷಪೂರಿತ ಧ್ವಜಗಳನ್ನು ಹಾರಿಸಿದಲ್ಲಿ ಅದರ ಹೊಣೆಯನ್ನು, ಅವರ ಪಾಲಿನ ಶಿಕ್ಷೆಯನ್ನು ಬಿಜೆಪಿ ಹೊರುತ್ತದೆಯೇ? ಧ್ವಜವನ್ನು ಟವೆಲ್‌ಗಿಂತಲೂ ಕಳಪೆಯಾಗಿ ತಯಾರಿಸಿದವರಿಗೆ ಯಾವ ಶಿಕ್ಷೆ? ಎಂದು ಪ್ರಶ್ನಿಸಿದೆ.

ಮುಂದುವರಿದು ಭ್ರಷ್ಟಾಚಾರದ ವಿರುದ್ಧವೂ ಟೀಕಿಸಿದ್ದು, ಬಿಜೆಪಿ ಸರ್ಕಾರದಲ್ಲಿ ಶೇ 40 ಕಮಿಷನ್ ಭ್ರಷ್ಟಾಚಾರದ ಸೋಂಕು ಕೋವಿಡ್‌ಗಿಂತಲೂ ಅಪಾಯಕಾರಿಯಾಗಿ ವ್ಯಾಪಿಸಿದೆ!. ನಿಗಮ, ಮಂಡಳಿಗಳಲ್ಲಿ ಬಿಜೆಪಿ ಭ್ರಷ್ಟೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಬಡವರ, ಹಿಂದುಳಿದವರ ಏಳಿಗೆ ಬದಲು ಭ್ರಷ್ಟರ ಏಳಿಗೆಯಾಗುತ್ತಿದೆ. ಬಡವರನ್ನು ತಲುಪಬೇಕಾದ ನೂರಾರು ಕೋಟಿ ಅನುದಾನ ಬಿಜೆಪಿ ಭ್ರಷ್ಟರ ತಿಜೋರಿ ಸೇರುತ್ತಿದೆ ಎಂದು ಕಾಂಗ್ರೆಸ್ ದೂರಿದೆ.

ಗಂಗಾ ಕಲ್ಯಾಣ ಯೋಜನೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎನ್ನುವ ಪತ್ರಿಕೆಯೊಂದರ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಮಾಜ ಕಲ್ಯಾಣ ಇಲಾಖೆಯಲ್ಲಿ ಸ್ವಯಂ ಕಲ್ಯಾಣ ಇಲಾಖೆಯಾಗಿರುವಾಗ ಗಂಗಾ ಕಲ್ಯಾಣದಲ್ಲಿ ಭ್ರಷ್ಟರ ಕಲ್ಯಾಣ ಆಗುತ್ತಿರುವುದರಲ್ಲಿ ಆಶ್ಚರ್ಯವಿಲ್ಲ!. ಇಲಾಖಾ ತನಿಖೆಯಲ್ಲಿ ಮೇಲ್ನೋಟದಲ್ಲೇ ಹಗರಣ ಸಾಭೀತಾಗಿದೆ, ಹೀಗಿದ್ದೂ ಭ್ರಷ್ಟರ ರಕ್ಷಣೆಗಾಗಿ ಉನ್ನತ ತನಿಖೆಗೆ ವಹಿಸದೆ ಸರ್ಕಾರ ಹಿಂದೇಟು ಹಾಕುತ್ತಾ ದಲಿತರಿಗೆ ಅನ್ಯಾಯವೆಸಗುತ್ತಿದೆ ಎಂದು ಆರೋಪಿಸಿದೆ.

SCROLL FOR NEXT