ರಾಜ್ಯ

ಚಿಕ್ಕಮಗಳೂರು: ಕಾರು ಸಮೇತ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಇಬ್ಬರನ್ನು ರಕ್ಷಿಸಿದ ಸ್ಥಳೀಯರು!

Shilpa D

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಅಯ್ಯನಕೆರೆ ಕೆರೆಯಲ್ಲಿ ಕಾರೊಂದು ಕೊಚ್ಚಿಹೋಗಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಕಾರಿನ ಕಿಟಕಿ ಗಾಜು ಒಡೆದು ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.

ಜಿಲ್ಲೆಯಲ್ಲೇ ಅತಿ ದೊಡ್ಡದಾದ ಮತ್ತು ರಾಜ್ಯದ ಎರಡನೇ ಅತಿ ದೊಡ್ಡ ಕೆರೆಯಾಗಿರುವ ಅಯ್ಯನಕೆರೆಗೆ ನಿರಂತರ ಮಳೆಯಿಂದ ನೀರು ತುಂಬಿದ್ದು, ಕೆರೆ ಕೋಡಿ ಬಿದ್ದಿದೆ. ಇದರ ನಡುವೆಯೇ ನೀರಿನಲ್ಲಿ ಕಾರು ಚಲಾಯಿಸಲು ಹೋಗಿ ಕಾರು ಕೊಚ್ಚಿಕೊಂಡು ಹೋಗಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು.

ರಸ್ತೆ ಮೇಲೆ ಸುಮಾರು ಐದು ಅಡಿ ನೀರು ಹರಿಯುತ್ತಿದ್ದರೂ ಕಾರು ಚಾಲಕರು ಹುಚ್ಚು ಸಾಹಸ ಮಾಡಲು ಹೋಗಿ ಜೀವಕ್ಕೆ ಕಂಟಕ ತಂದುಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ನಡೆದಿದೆ.

ರಸ್ತೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಕಾರನ್ನು ಚಲಾಯಿಸಲು ಹೋಗಿ ಕಾರು ಹಳ್ಳಕ್ಕೆ ಉರುಳಿ ಬಿದ್ದಿದೆ. ಕೂಡಲೇ ಕಾರನ್ನ ಜೆಸಿಬಿ ಮೂಲಕ ಮೇಲೆ ಎತ್ತುವ ಪ್ರಯತ್ನ ಮಾಡಿದರು ಸಾಧ್ಯವಾಗಿಲ್ಲ. ಅಲ್ಲೇ ಇದ್ದ ಸ್ಥಳೀಯರು  ಕೂಡಲೇ ಕಾರಿನ ಮುಂಭಾಗದ ಗ್ಲಾಸ್ ಒಡೆದು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಕಾರಿನ ಮಾಲೀಕ ಕೇತುಮಾರನಹಳ್ಳಿಯ ಗಿರೀಶ್ ಎಂಬುವವರಾಗಿದ್ದಾರೆ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ದಶ ದಿಕ್ಕುಗಳಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕಳೆದ 15  ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ರಸ್ತೆ, ಗದ್ದೆಗಳು ಜಲಾವೃತವಾಗಿ ಪ್ರವಾಹ‌ ಭೀತಿಯಿಂದ ಜನ ಸಾಮಾನ್ಯರು ಜೀವ ಭಯದಲ್ಲಿ ಬದುಕುತ್ತಿದ್ದಾರೆ. ಪ್ರವಾಹದಲ್ಲಿ ಕೆಲವರು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ.

SCROLL FOR NEXT