ರಾಜ್ಯ

ಅಂಗಾಂಗ ದಾನ ಮಾಡಿ ಮಾದರಿಯಾಗಿ; ಯುವಜನತೆ ಈ ದೇಶದ ಭವಿಷ್ಯ: 'ಹರ್ ಘರ್ ತಿರಂಗ' ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

Sumana Upadhyaya

ಬೆಂಗಳೂರು: ದೇಶದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ಇಂದು ಶನಿವಾರದಿಂದ ಮೂರು ದಿನಗಳ ಕಾಲ 'ಹರ್ ಘರ್ ತಿರಂಗ' ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮಕ್ಕೆ ಸರ್ಕಾರ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧ ಮುಂದೆ ಚಾಲನೆ ನೀಡಿದರು.

ಮನೆ ಮನೆಗಳಲ್ಲಿ ತಿರಂಗ ಅಭಿಯಾನ ಅಂಗವಾಗಿ ವಿಧಾನಸೌಧ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಯುವಜನರು, ವಿದ್ಯಾರ್ಥಿಗಳು ಸೇರಿ ತ್ರಿವರ್ಣ ಧ್ವಜ ಹಾರಿಸಿದರು.

ಇದಕ್ಕೂ ಮೊದಲು ಮುಖ್ಯಮಂತ್ರಿಗಳು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ "ಮನೆ ಮನೆಯಲ್ಲೂ ತ್ರಿವರ್ಣ ದ್ವಜ" ಅಭಿಯಾನದ ಅಂಗವಾಗಿ ಆರ್ ಟಿ ನಗರದ ಅವರ ನಿವಾಸದ ಮೇಲೆ ಕುಟುಂಬ ಸದಸ್ಯರೊಂದಿಗೆ ರಾಷ್ಟ್ರ ಧ್ವಜ ಹಾರಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಉಪಸ್ಥಿತರಿದ್ದರು.

ವಿಧಾನಸೌಧ ಮುಂದೆ ನಡೆದ ಕಾರ್ಯಕ್ರಮದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಸಂಪುಟದ ಸಹೋದ್ಯೋಗಿಗಳು, ವಿಧಾನ ಪರಿಷತ್ ಸಭಾಪತಿಗಳು ಉಪಸ್ಥಿತರಿದ್ದರು. ಸಭೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದೆ.

ಸಿಎಂ ಬೊಮ್ಮಾಯಿ, ಇಂದಿನಿಂದ ದೇಶದೆಲ್ಲೆಡೆ ಹರ್ ಘರ್ ತಿರಂಗಾ ಅಭಿಯಾನ ನಡೆಯುತ್ತಿದೆ. ರಾಜ್ಯದಲ್ಲಿ ತಿರಂಗಾ ಅಭಿಯಾನ ಯಶಸ್ವಿಗೊಳಿಸಲು ಯುವಜನತೆ ಸಹಕರಿಸಬೇಕು. ಈ ದೇಶ ಯುವಜನತೆಗೆಯ ಭವಿಷ್ಯ ಮೇಲೆ ನಿಂತಿದೆ. ಎಲ್ಲಾ ಗ್ರಾಮ ಪಂಚಾಯತ್​ಗೆ ಧ್ವಜ‌ ವಿತರಣೆ ಮಾಡಲಾಗಿದೆ. ಈಗಾಗಲೇ ಸರ್ಕಾರ ವತಿಯಿಂದ 1 ಕೋಟಿ 8 ಲಕ್ಷ ಧ್ವಜಗಳನ್ನು ವಿತರಿಸಿದ್ದೇವೆ. ರಾಜ್ಯದಲ್ಲಿ 1.20 ಕೋಟಿಗೂ ಹೆಚ್ಚು ಕಡೆ ತಿರಂಗಾ ಹಾರಿಸಲಾಗುತ್ತದೆ ಎಂದರು.

ಸ್ವಾತಂತ್ರ್ಯದ75 ವರ್ಷ ಮಹತ್ವದ ಘಟ್ಟವಾಗಿದೆ. ಮನುಷ್ಯ ಜೀವನದಲ್ಲಿ ಕೂಡ 75 ವರ್ಷವೆಂದರೆ ಬಹಳ ದೀರ್ಘ ವಯಸ್ಸು. ಇದು ಆತ್ಮಾವಲೋಕನ ಹಾಗೂ‌ ಸಿಂಹಾವಲೋಕನ ಮಾಡುವ ಸಂದರ್ಭವಾಗಿದೆ. ಉಳಿದ 25 ವರ್ಷ ಅಮೃತ ಕಾಲ ಎಂದು ಪ್ರಧಾನಿ ಕರೆದಿದ್ದಾರೆ. ಆ ಅವಧಿಯಲ್ಲಿ ಭಾರತವನ್ನು ಶಕ್ತಿ ಶಾಲಿಯಾಗಿ ಸಂಪದ್ಭರಿತವಾಗಿ ಇಡೀ ವಿಶ್ವವೇ ನಮ್ಮ ಕಡೆ ನೋಡುವಂತೆ ಮಾಡಬೇಕು ಎಂದರು.

ಆಗಸ್ಟ್ 15 ರಂದು ಕೂಡಾ ನಾವೆಲ್ಲ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡಬೇಕು. ಜಾತಿ ಮತ ಪಂಥ ಮೀರಿ ನಾವೆಲ್ಲ ಒಂದು ಎಂಬ ಸಂದೇಶ ಸಾರಬೇಕಿದೆ ಎಂದು ಸಿಎಂ ಇದೇ ಸಂದರ್ಭದಲ್ಲಿ ವಿನಂತಿ ಮಾಡಿದರು.

ವಿಶ್ವ ಅಂಗಾಂಗ ದಾನ ದಿನ: ಇಂದು ಆಗಸ್ಟ್ 13 ವಿಶ್ವ ಅಂಗಾಂಗ ದಿನವಾಗಿದ್ದು, ಇದರ ಅಂಗವಾಗಿ ಸಾವಿರಾರು ವಿದ್ಯಾರ್ಥಿಗಳು ಮೇಕ್ರಿ ಸರ್ಕಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಮಾನವ ಸರಪಳಿ ರಚಿಸಿ ಮೆರವಣಿಗೆ ಸಾಗಿ ಅಂಗಾಂಗ ದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ರಾಜ್ಯದ ಹಲವು ನರ್ಸಿಂಗ್ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಆರೋಗ್ಯ ಇಲಾಖೆ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ವಿಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ವ್ಯಕ್ತಿ ಸತ್ತ ಮೇಲೂ ಅವನ ಅಂಗಾಂಗಳನ್ನು ದಾನ ಮಾಡಿ ಮತ್ತೊಬ್ಬರ ಜೀವಕ್ಕೆ, ಜೀವನಕ್ಕೆ ನೆರವಾಗಬಹುದು. ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ 8 ಜೀವಗಳನ್ನು ಉಳಿಸಬಹುದು. ಚರ್ಮದಿಂದ ಹಿಡಿದು ಎಲ್ಲಾ ಅಂಗಾಂಗ ದಾನ ಮಾಡಬಹುದು.

ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದಕಬಹುದು. ಅಂಗಾಂಗಳ ದಾನ ಮಾಡುವ ಮೂಲಕ ಸತ್ತ ನಂತರವೂ ಜೀವಂತವಾಗಿರಬಹುದು, ಹಾಗಾಗಿ ಎಲ್ಲರೂ ಅಂಗಾಂಗ ದಾನ ಮಾಡಿ ಎಂದರು.

ಇಂದು ರಾಜ್ಯದ 18 ಕೇಂದ್ರಗಳಲ್ಲಿ ಅಂಗಾಂಗ ದಾನ ಮಾಡುವ ಕೇಂದ್ರಗಳಿವೆ. ಎಲ್ಲರೂ ಅಂಗಾಂಗ ದಾನ ಮಾಡಿ ಕೈಜೋಡಿಸಬೇಕು ಎಂದು ತಾವು ಅಂಗಾಂಗ ದಾನ ಮಾಡುವುದಾಗಿ ಈಗಾಗಲೇ ಸಹಿ ಮಾಡಿದ್ದೇವೆ ಎಂದರು.

SCROLL FOR NEXT