ಚಿತ್ರದುರ್ಗ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮುರುಘಾ ಮಠದ ಆಡಳಿತಾಧಿಕಾರಿ ಎಸ್ .ಕೆ. ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ಬಸವರಾಜನ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಆಡಳಿತಾಧಿಕಾರಿ ಬಸವರಾಜನ್ ಅವರು ಪರಿಶೀಲನೆ ನೆಪದಲ್ಲಿ ಕೊಠಡಿಗೆ ಪ್ರವೇಶಿಸಿ ಕಿರುಕುಳ ನೀಡುತ್ತಿದ್ದರು. ದೇಹದ ಅಂಗಾಂಗಗಳನ್ನು ಮುಟ್ಟಿ ಹಿಂಸೆ ನೀಡುತ್ತಿದ್ದರು. ಬಲತ್ಕಾರಕ್ಕೆ ಯತ್ನಿಸಿದಾಗ ಪ್ರತಿರೋಧ ತೋರಲಾಯಿತು. ಇದರಿಂದ ಕುಪಿತಗೊಂಡ ಅವರು ಕೊಲೆ ಬೆದರಿಕ ಹಾಕಿದ್ದರು ಎಂದು ದೂರಿನಲ್ಲಿ ಮಹಿಳೆ ಮಾಹಿತಿ ನೀಡಿದ್ದಾರೆ.
ಮಠದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರಿಬ್ಬರು ವೈಯಕ್ತಿಕ ಕಾರಣ ನೀಡಿ ಹಾಸ್ಟೆಲ್ ನಿಂದ ಹೊರ ಹೋಗಿದ್ದರು. ಆದರೆ, ಅವರು ಮನೆಗೆ ತೆರಳದೇ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆ ತಲುಪಿದ್ದರು. ಸಂಬಂಧಿಸಿದವರಿಗೆ ಮಾಹಿತಿ ನೀಡದೇ ಬಸವರಾಜನ್ ಮಕ್ಕಳನ್ನು ಕರೆತಂದು ಅಕ್ರಮವಾಗಿ ಮನೆಯಲ್ಲಿ ಇಟ್ಟುಕೊಂಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಪ್ರತಿಷ್ಠಿತ ಮಠವೊಂದರ ಸ್ವಾಮೀಜಿಯಿಂದ ನಿರಂತರ ಲೈಂಗಿಕ ಕಿರುಕುಳ: ಚಿತ್ರದುರ್ಗದ ಮುರುಘಾಶರಣರ ವಿರುದ್ಧ ಎಫ್ಐಆರ್!
ಈ ಮಧ್ಯೆ ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಮೈಸೂರಿನ ಒಡನಾಡಿ ಸಂಸ್ಥೆ ಒತ್ತಾಯಿಸಿದೆ.