ರಾಜ್ಯ

ರಾಮನಗರ ಜಿಲ್ಲೆಯಲ್ಲಿ 'ಮಕ್ಕಳ ಗ್ರಾಮ ಸಭೆ': ಶಾಲೆಯ ಅಗತ್ಯತೆ, ಮೂಲಸೌಕರ್ಯಗಳ ಬಗ್ಗೆ ವಿದ್ಯಾರ್ಥಿಗಳಿಂದ ಚರ್ಚೆ!

Manjula VN

ಬೆಂಗಳೂರು: ರಾಮನಗರ ಜಿಲ್ಲೆಯ ಗೋಪಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ಗ್ರಾಮ ಸಭೆ ಗುರುವಾರ ನಡೆಯಿತು.

ಸುಮಾರು 300 ಮಕ್ಕಳು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಮಕ್ಕಳು ತಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳ ಕುರಿತು ಚರ್ಚಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಲಾಭೋದ್ದೇಶವಿಲ್ಲದ ಸಂಸ್ಥೆ ಸಿಎಂಸಿಎ ಆಶ್ರಯದಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು. ಸಿಎಂಸಿಎ ಮಕ್ಕಳಿಗೆ ಜೀವನ ಕೌಶಲ್ಯ ಮತ್ತು ಸಕ್ರಿಯ ನಾಗರಿಕತೆಗೆ ಮೌಲ್ಯಗಳನ್ನು ಕಲಿಸುವ ಉತ್ತೇಜಕ ಕಲಿಕೆಯ ಅನುಭವಗಳನ್ನು ಒದಗಿಸುತ್ತದೆ.

ಸಭೆಯು ಮಕ್ಕಳನ್ನು ಸಮಾನ ನಾಗರಿಕರೆಂದು ಗುರುತಿಸುತ್ತದೆ ಮತ್ತು ಅವರ ಹಕ್ಕನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಸಭೆಗೂ ಮುನ್ನ ಸಿಎಂಸಿಎ ಮಕ್ಕಳೊಂದಿಗೆ ಜಾಗೃತಿ ಸಭೆಗಳನ್ನು ನಡೆಸಿತು. ಸಭೆಯ ಉದ್ದೇಶ ಹಾಗೂ ಹಕ್ಕುಗಳ ಕುರಿತು ಮಾಹಿತಿ ನೀಡಿದರು.

ಬಳಿಕ ಅಧಿಕಾರಿಗಳೊಂದಿಗೆ ಚರ್ಚೆಯಲ್ಲಿ ಪಾಲ್ಗೊಂಡ ಮಕ್ಕಳು, ತಮ್ಮ ಶಾಲೆಗಳಿಗೆ ಮೂಲಸೌಕರ್ಯ ಮತ್ತು ಸಿಬ್ಬಂದಿ ಅಗತ್ಯತೆಗಳು, ಶುದ್ಧ ಕುಡಿಯುವ ನೀರಿನ ಅಗತ್ಯತೆ, ಗ್ರಾಮದಲ್ಲಿನ ರಸ್ತೆಗಳು, ಬಸ್ ಮಾರ್ಗಗಳು ಮತ್ತು ಇತರೆ ಸಮಸ್ಯೆಗಳಿಗೆ ಕುರಿತು ಚರ್ಚಿಸಿದರು.

ಮಕ್ಕಳಿಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಈ ಸಭೆ ಉತ್ತಮ ವೇದಿಕೆಯಾಗಿದೆ. ಅಲ್ಲದೆ, ಅಧಿಕಾರಿಗಳಿಗೆ ಮಕ್ಕಳಿಂದ ಸಮಸ್ಯೆ ಕೇಳುವುದೇ ಅದ್ಭುತ ಅನುಭವ ಎಂದು ರಾಮನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಹೇಳಿದ್ದಾರೆ.

ಸಿಎಂಸಿಎ ಸಹ ನಿರ್ದೇಶಕ ಮರುಳಪ್ಪ ಪಿಆರ್ ಮಾತನಾಡಿ, ಇದೊಂದು ಅತ್ಯುತ್ತಮ ಉಪಕ್ರಮವಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಪ್ರಜಾಪ್ರಭುತ್ವದ ಅನುಭವವನ್ನು ನೀಡುತ್ತದೆ. ಸಭೆಯಲ್ಲಿ ಭಾಗವಹಿಸುವ ಮೂಲಕ, ಮಕ್ಕಳು ನಿರ್ಣಾಯಕ ಕೌಶಲ್ಯಗಳನ್ನು ಪಡೆಯುತ್ತಾರೆ. ತಮ್ಮನ್ನು ಬೆಂಬಲಿಸಲು ಹಿರಿಯರು, ಅಧಿಕಾರಿಗಳು ಲಭ್ಯವಿರುತ್ತಾರೆಂಬುದನ್ನು ತಿಳಿಯುತ್ತಾರೆ. ಸರ್ಕಾರಿ ಕೆಲಸಗಳಲ್ಲಿ ಕಿರಿಯ ನಾಗರೀಕರಾಗಿ ತೊಡಗಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

SCROLL FOR NEXT