ರಾಜ್ಯ

ಕಾಂಗ್ರೆಸ್ ನಾಯಕರಿಗೆ ದತ್ತಪೀಠಕ್ಕೆ ಸೇರಿದ ಭೂಮಿ ಹಂಚಿಕೆ; ತನಿಖೆ ನಡೆಸಬೇಕೆಂದು ಸಿಟಿ ರವಿ ಒತ್ತಾಯ

Ramyashree GN

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ದತ್ತಾತ್ರೇಯ ಪೀಠಕ್ಕೆ ಸೇರಿದ ಜಮೀನನ್ನು ಕಾಂಗ್ರೆಸ್ ಮುಖಂಡರಿಗೆ ಹಂಚಿಕೆ ಮಾಡಿರುವ ಕುರಿತು ತನಿಖೆ ನಡೆಸುವಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಶನಿವಾರ ಒತ್ತಾಯಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಉಳುವವರಿಗೆ ಭೂಮಿ ನೀಡಲು ಕಾನೂನು ಜಾರಿಗೆ ತರುವ ಮೊದಲು ದತ್ತಾತ್ರೇಯ ಪೀಠದ ಹೆಸರಿನಲ್ಲಿ 1,861 ಎಕರೆ ಭೂಮಿ ಇತ್ತು. ಆದರೆ, ಅದನ್ನು ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕೆಲವು ಕಾಂಗ್ರೆಸ್ ನಾಯಕರಿಗೆ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು ಮತ್ತು ಭೂ ಮಂಜೂರಾತಿಯನ್ನು ಸರ್ಕಾರ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ದತ್ತ ಪೀಠದ ವಿಚಾರವಾಗಿ ಸರ್ಕಾರ ತನ್ನ ಮಾತನ್ನು ಉಳಿಸಿಕೊಂಡಿದ್ದು, ನ್ಯಾಯಾಲಯದ ಆದೇಶದಂತೆ ಸಂಪುಟ ಉಪಸಮಿತಿ ನಿರ್ಣಯದಂತೆ ವ್ಯವಸ್ಥಾಪನಾ ಸಮಿತಿ ರಚಿಸಿ ಅರ್ಚಕರ ನೇಮಕಕ್ಕೆ ಕ್ರಮಕೈಗೊಂಡಿದೆ ಎಂದರು.

ದೇವಸ್ಥಾನಕ್ಕೆ ಸೇರಿದ ಭೂಮಿಯನ್ನು ಕಬಳಿಸುವ ಸಂಚು ಕಾಂಗ್ರೆಸ್ ನಾಯಕರು ದತ್ತ ಜಯಂತಿ ಆಚರಣೆಯನ್ನು ವಿರೋಧಿಸಲು ಕಾರಣವಾಗಿದ್ದು, ಅಕ್ರಮಗಳ ತನಿಖೆಗೆ ಸರ್ಕಾರ ರಾಜ್ಯ ಮಟ್ಟದ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ನೇಮಿಸಬೇಕು ಎಂದು ಹೇಳಿದರು.

ಹಿಂದೂ ಅರ್ಚಕರ ನೇಮಕದ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ ಎಂದು ಆರೋಪಿಸಿದ ಅವರು, ಮಾಜಿ ಸಿಎಂ ಕರ್ನಾಟಕದ ಜನರ ಕ್ಷಮೆಯಾಚಿಸಬೇಕು ಎಂದು ಹೇಳಿದರು. ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದ ರವಿ, ಎರಡೂ ರಾಜ್ಯಗಳ ಚುನಾವಣೆಯಲ್ಲಿ ಪಕ್ಷ ಗೆಲ್ಲಲಿದೆ ಎಂದು ಹೇಳಿದ್ದಾರೆ.

SCROLL FOR NEXT