ರಾಜ್ಯ

ಮಾವು ಪ್ರಿಯರಿಗೆ ಸಿಹಿ ಸುದ್ದಿ: ಈ ಬಾರಿ ಬಂಪರ್ ಇಳುವರಿ!

Manjula VN

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಮಾವಿನ ಮರಗಳು ಗಾಢ ಹಸುರಿನ ಚಿಗುರು ಎಲೆಗಳಿಂದ ಕಂಗೊಳಿಸುತ್ತಿದ್ದು, ಬಂಗಾರ ಬಣ್ಣದ ಹೂಗಳಿಂದ ನೋಡುಗರ ಕಣ್ಮನ ಸೆಳೆಯುತ್ತಿದೆ. ನವೆಂಬರ್ ತಿಂಗಳಿನಲ್ಲಿ ಕಡಿಮೆ ಮಳೆಯಾದ ಹಿನ್ನೆಲೆಯಲ್ಲಿ ಈ ಬಾರಿ ಮಾವು ಉತ್ತಮ ಇಳುವರಿ ಬರುವ ನಿರೀಕ್ಷೆ ಹುಟ್ಟಿಸಿದೆ.

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಹೂವುಗಳ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಆದರೆ, ಈವರ್ಷ ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಳೆಯಾಗದ ಕಾರಣ ಮಾವಿನ ಬೆಳೆಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ.

16 ಜಿಲ್ಲೆಗಳಲ್ಲಿ ಕನಿಷ್ಠ 1.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ಬೆಳಗಾವಿ, ಹಾವೇರಿ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಮಾವನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ.

ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಸ್ ವಿ ಹಿತ್ತಲಮನಿ ಮಾತನಾಡಿ, ನವೆಂಬರ್‌ನಲ್ಲಿ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಮಾವಿನ ಮರಗಳು ಹೂ ಬಿಡಲು ಪ್ರಾರಂಭಿಸಿವೆ. ಡಿಸೆಂಬರ್ ಅಂತ್ಯದ ವೇಳೆಗೆ ಹಾವೇರಿ ಮತ್ತು ಧಾರವಾಡ ಭಾಗದಲ್ಲಿ ಆರಂಭವಾಗಲಿದ್ದು, ಜನವರಿ ಮತ್ತು ಫೆಬ್ರವರಿ ವೇಳೆಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹೂಗಳು ಅರಳಲಿವೆ ಎಂದು ಹೇಳಿದ್ದಾರೆ.

“ಅದೃಷ್ಟವಶಾತ್, ಕಳೆದ ಬಾರಿಯಷ್ಟು ಈ ಬಾರಿಯ ನವೆಂಬರ್‌ ತಿಂಗಳಿನಲ್ಲಿ ಮಳೆಯಾಗಿಲ್ಲ. ತೇವಾಂಶದ ಕಾರಣ ಹೂವು ಕಪ್ಪಾಗುವ ರೋಗಗಳು ಎದುರಾಗುತ್ತವೆ. ಹಾಗಾಗಿ ಕೀಟನಾಶಕ ಸಿಂಪಡಣೆ ಸೇರಿದಂತೆ ಕೆಲವು ಕ್ರಮಗಳನ್ನು ರೈತರಿಗೆ ಶಿಫಾರಸು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಮುಂದಿನ ವರ್ಷ 12 ಲೀಟರ್ ಟನ್ ಕೊಯ್ಲು ಬರುವ ನಿರೀಕ್ಷೆ ಇದೆ: ಅಧಿಕಾರಿಗಳು
“ಮುಂದಿನ ಕೆಲವು ವಾರಗಳಲ್ಲಿ ಮಳೆಯ ಮುನ್ಸೂಚನೆ ಇಲ್ಲದಿರುವುದರಿಂದ ರೈತರಿಗೆ ಉತ್ತಮ ಫಸಲು ಪಡೆಯಲು ಸಹಾಯವಾಗಿದೆ. 2023 ವರ್ಷವು ಮಾವು ಬೆಳೆಯುತ್ತಿರುವ ರೈತರಿಗೆ ಉತ್ತಮ ವರ್ಷವಾಗಿರುತ್ತದೆ" ಎಂದು ಹಿತ್ತಲಮನಿ ಹೇಳಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಈಗಾಗಲೇ ಹೂಬಿಡುವಿಕೆಯು ಪ್ರಾರಂಭವಾಗಿದೆ ಮತ್ತು ಮಾರ್ಚ್ ಅಂತ್ಯದ ವೇಳೆಗೆ ನಾವು ಮೊದಲ ಬೆಳೆಯನ್ನು ನಿರೀಕ್ಷಿಸಬಹುದು. ಕೋಲಾರ ಮತ್ತು ಧಾರವಾಡ ಭಾಗದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಫಸಲು ಬರುತ್ತದೆ. ಆದರೆ ಇದು ಹೂಬಿಡುವಿಕೆಯು ಯಾವಾಗ ಪ್ರಾರಂಭವಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.

2023ರಲ್ಲಿ ಕನಿಷ್ಠ 12 ಲಕ್ಷ ಟನ್ ಮಾವು ಸಿಗುವ ನಿರೀಕ್ಷೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದಾರೆ. ಶೇ.80ರಷ್ಟು ಹೂವು ಕಾಯಿಯಾಗಲಿದೆ. "ಕೋಲಾರ ಪ್ರದೇಶವು ಸಮುದ್ರ ಮಟ್ಟದಿಂದ 3,000 ಮೀಟರ್ ಎತ್ತರದಲ್ಲಿದೆ. ಇತರ ಪ್ರದೇಶಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಇಲ್ಲಿನ ಮಾವಿನ ಮರಗಳು ತಡವಾಗಿ ಹೂವುಗಳನ್ನು ಬಿಡುತ್ತವೆ. ಹೀಗಾಗಿ ಬೇಸಿಗೆಯ ಮಳೆ ಮತ್ತು ಆಲಿಕಲ್ಲು ಮಳೆಗೆ ಗುರಿಯಾಗುತ್ತವೆ, ಇದರ ಹೊರತಾಗಿಯೂ ಈ ವರ್ಷ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ ಎಂದಿದ್ದಾರೆ.

SCROLL FOR NEXT