ರಾಜ್ಯ

ಗಡಿ ವಿವಾದ: ರಾಜ್ಯ ಚಳಿಗಾಲ ಅಧಿವೇಶನದ ಮೊದಲ ದಿನ ಸಭೆ ನಡೆಸಲು ಎಂಇಎಸ್ ನಿರ್ಧಾರ

Manjula VN

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ನಡುವೆಯೇ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕರ್ನಾಟಕ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಡಿಸೆಂಬರ್ 19 ರಂದು ಬೆಳಗಾವಿಯಲ್ಲಿ ಸಭೆ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಬೆಳಗಾವಿಯ ವ್ಯಾಕ್ಸಿನ್ ಡಿಪೋದಲ್ಲಿ ಈ ಸಭೆ ನಡೆಯಲಿದ್ದು, ಈ ಸಭೆಗೆ ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ, ಮಾಜಿ ಸಿಎಂ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಹಲವು ಪ್ರಮುಖ ರಾಜಕಾರಣಿಗಳನ್ನು ಎಂಇಎಸ್ ಆಹ್ವಾನಿಸಿದೆ ಎಂದು ತಿಳಿದುಬಂದಿದೆ.

ಸಭೆ ಕುರಿತು ಮಹಾರಾಷ್ಟ್ರ ಏಕೀಕರಣ ಸಮಿತಿಯು ಈಗಾಗಲೇ ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿಗೆ ಮನವಿ ಪತ್ರವನ್ನು ಸಲ್ಲಿಸಿದೆ ಎಂದು ವರದಿಗಳು ತಿಳಿಸಿವೆ.

“ಕರ್ನಾಟಕ ಸರ್ಕಾರವು ಗಡಿ ವಿವಾದ ಸಂಬಂಧ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ನ್ಯಾಯಾಲಯದಲ್ಲಿ ಸಂಕಷ್ಟ ಎದುರಿಸುತ್ತಿದೆ. ಮರಾಠಿ ಭಾಷಾಭಿಮಾನಿಗಳ ಆಶಯಕ್ಕೆ ವಿರುದ್ಧವಾಗಿ ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನವನ್ನು ಬಲವಂತವಾಗಿ ನಡೆಸುತ್ತಿದೆ. ಆದ್ದರಿಂದ, ಡಿಸೆಂಬರ್ 19 ರಂದು ಮರಾಠಿಗಳ ಆಶಯಗಳನ್ನು ವ್ಯಕ್ತಪಡಿಸಲು ಮಹಾಮೇಳವ, ಮರಾಠಿ ಭಾಷಾಶಾಸ್ತ್ರದ ಸಮಾವೇಶವನ್ನು ಯೋಜಿಸಲಾಗಿದೆ ಪತ್ರದಲ್ಲಿ ತಿಳಿಸಿದೆ.

ಮೂಲಗಳ ಪ್ರಕಾರ, ಎಂಇಎಸ್ ಪ್ರತಿ ರಾಜಕೀಯ ಪಕ್ಷದಿಂದ ಇಬ್ಬರು ಉನ್ನತ ನಾಯಕರನ್ನು ಆಹ್ವಾನಿಸಿದೆ ಎಂದು ತಿಳಿದುಬಂದಿದೆ. ಮಹಾರಾಷ್ಟ್ರ ಸಿಎಂ ಶಿಂಧೆ, ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕರೆ, ಬಿಜೆಪಿಯ ಡಿಸಿಎಂ ದೇವೇಂದ್ರ ಫಡ್ನವೀಸ್, ಎನ್'ಸಿಪಿ ನಾಯಕ ಶರದ್ ಪವಾರ್, ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಸಭೆಗೆ ಆಹ್ವಾನಿಸಲಾಗಿದೆ ಎಂದು ತಿಳಿದಿಬಂದಿದೆ.

ಆದರೆ, ಈ ಹಿಂದೆ ಎಂಇಎಸ್ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಈ ಯಾವೊಬ್ಬ ನಾಯಕರು ಬೆಳಗಾವಿಗೆ ಭೇಟಿ ನೀಡಿರಲಿಲ್ಲ. ನೆರೆಯ ಕೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಿಂದ ಕೇವಲ ಒಬ್ಬರು ಅಥವಾ ಇಬ್ಬರು ಶಾಸಕರು ಮಾತ್ರ ಸಭೆಗೆ ಹಾಜರಾಗಿದ್ದರು.

ಎಂಇಎಸ್‌ ಮುಖಂಡ ಹಾಗೂ ಮಾಜಿ ಶಾಸಕ ಮನೋಹರ್‌ ಕಿಣೇಕರ್‌ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಬೆಳಗಾವಿಯಲ್ಲಿ ಮಹಾಮೇಳವಾ ನಡೆಸಿ ಸರ್ಕಾರಗಳಿಗೆ ಧ್ವನಿ ಎತ್ತುವಂತೆ ಒತ್ತಾಯಿಸುತ್ತೇವೆ. ನಾವು ಮಹಾರಾಷ್ಟ್ರದ ಎಲ್ಲ ಪ್ರಮುಖ ನಾಯಕರನ್ನು ಆಹ್ವಾನಿಸಿದ್ದೇವೆ. ಕರ್ನಾಟಕ ಪೊಲೀಸರು ಅವರನ್ನು ಬೆಳಗಾವಿಗೆ ಪ್ರವೇಶಿಸಲು ಬಿಡುವುದಿಲ್ಲ ಎಂಬುದು ನಮಗೆ ತಿಳಿದಿದೆ. ಆದರೆ, ನಾವು ಸಭೆ ನಡೆಸುವಲ್ಲಿ ದೃಢವಾಗಿದ್ದೇವೆಂದು ಹೇಳಿದ್ದಾರೆ.

SCROLL FOR NEXT