ರಾಜ್ಯ

ಬೂತ್ ಮಟ್ಟದಲ್ಲಿ ಖಾಯಂ ಏಜೆಂಟ್'ಗಳ ನೇಮಿಸಿ: ರಾಜಕೀಯ ಪಕ್ಷಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಸೂಚನೆ

Manjula VN

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಸಾಪ್ತಾಹಿಕ ಸಭೆಗಳಲ್ಲಿ ನಿರಂತರತೆ ಕಾಯ್ದುಕೊಳ್ಳಲು ಖಾಯಂ ಬೂತ್ ಏಜೆಂಟರನ್ನು ನೇಮಿಸುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.

ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳು ಮತ್ತು ಹಕ್ಕುಗಳ ಪರಿಶೀಲನೆಗೆ ಸಂಬಂಧಿಸಿದಂತೆ ಶುಕ್ರವಾರ ತುಷಾರ್ ಗಿರಿನಾಥ್ ಅವರು ಮಾತನಾಡಿದರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ವಾರಕ್ಕೊಮ್ಮೆ ಸಭೆಗಳು ನಡೆಯಲಿದ್ದು, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ರಾಜಕೀಯ ಪಕ್ಷದ ಏಜೆಂಟರನ್ನು ಒಳಗೊಂಡು ನಮೂನೆ 6 (ಹೊಸ ನೋಂದಣಿ), ನಮೂನೆ 7 (ಅಳಿಸುವಿಕೆ) ಮತ್ತು ನಮೂನೆ 8 ರ ಅಡಿಯಲ್ಲಿ ತಿದ್ದುಪಡಿಗಾಗಿ ಕರಡು ಪಟ್ಟಿಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.

ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಚುನಾವಣಾ ತಯಾರಿ ಪ್ರಕ್ರಿಯೆಯನ್ನು ಬಲಪಡಿಸಲು ಬಿಬಿಎಂಪಿ 12 ಕೆಎಎಸ್ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಿದೆ. ಈ ಅಧಿಕಾರಿಗಳ ನೇತೃತ್ವದಲ್ಲಿ ಮತದಾರರ ಮಾಹಿತಿ ಪರಿಶೀಲನೆ ನಡೆಯಲಿದ್ದು, ಅವರು ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮೇಲೆ ನಿಗಾ ವಹಿಸಲಿದ್ದಾರೆಂದು ತಿಳಿಸಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಮಹದೇವಪುರ ಮತ್ತು ಶಿವಾಜಿನಗರ ವಿಧಾನಸಭೆಗಳಲ್ಲಿ ಮತದಾರರ ಮಾಹಿತಿ ಪರಿಷ್ಕರಣೆ ಮಾಡಲಾಗುತ್ತಿದ್ದು, ಸಂಪೂರ್ಣ ಮರುಪರಿಶೀಲನೆ ಪ್ರಗತಿಯಲ್ಲಿದೆ ಮತ್ತು ಆಕ್ಷೇಪಣೆಗಳು ಮತ್ತು ಹಕ್ಕುಗಳ ದಿನಾಂಕವನ್ನು ಡಿಸೆಂಬರ್ 24 ರವರೆಗೆ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.

25 ವಿಧಾನಸಭಾ ಕ್ಷೇತ್ರಗಳ ಮತದಾರರ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ದೋಷಗಳಿದ್ದಲ್ಲಿ ಮತದಾರರು ಮತ್ತು ರಾಜಕೀಯ ಪಕ್ಷಗಳು ಬದಲಾವಣೆಗಳನ್ನು ಕೋರಬಹುದು. ಮತದಾರರು ಮತ್ತು ರಾಜಕೀಯ ಪಕ್ಷಗಳ ಅನುಕೂಲಕ್ಕಾಗಿ ಎಲ್ಲಾ ಬಿಎಲ್‌ಒಗಳ ಮಾಹಿತಿಯನ್ನು ಅವರ ಫೋನ್ ಸಂಖ್ಯೆಗಳು ಮತ್ತು ವಾರ್ಡ್ ಮತ್ತು ರಸ್ತೆ ವಿವರಗಳೊಂದಿಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ರಾಜಕೀಯ ಪಕ್ಷಗಳು ತಮ್ಮ ಇ-ಮೇಲ್ ಐಡಿ ಕೊಟ್ಟಿದ್ದಾರೆ. ಪ್ರತಿ ವಾರದ ಮಾಹಿತಿ ಆಯಾ ರಾಜಕೀಯ ಪಕ್ಷಕ್ಕೆ ಕಳುಹಿಸುತ್ತೇವೆ" ಎಂದು ಹೇಳಿದರು.

SCROLL FOR NEXT