ರಾಜ್ಯ

ಬಿಜೆಪಿ ಹಿಂದುತ್ವವನ್ನು ಬದಿಗೊತ್ತಿದೆ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

Ramyashree GN

ಮಂಗಳೂರು: ಹಿಂದುತ್ವದ ಅಜೆಂಡಾವನ್ನು ಬದಿಗೊತ್ತಿದ ಬಿಜೆಪಿಯನ್ನು ಸರಿದಾರಿಗೆ ತರಲು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಚುನಾವಣಾ ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ.

ಶನಿವಾರ ಉಡುಪಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಮುತಾಲಿಕ್, ರಾಜ್ಯ ವಿಧಾನಸಭೆಯಲ್ಲಿ ಹಿಂದೂಗಳ ಧ್ವನಿಯನ್ನು ಪ್ರತಿನಿಧಿಸಲು ಬಯಸಿದ್ದು, ಈ ತಿಂಗಳ ಅಂತ್ಯದ ವೇಳೆಗೆ ತಮ್ಮ ಅಭ್ಯರ್ಥಿಯನ್ನು ಮತ್ತು ಕ್ಷೇತ್ರವನ್ನು ಪ್ರಕಟಿಸುವುದಾಗಿ ಹೇಳಿದರು.

ಸುಮಾರು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ್ದು, ಶೀಘ್ರದಲ್ಲೇ ತಾವು ಸ್ಪರ್ಧಿಸಲಿರುವ ಕ್ಷೇತ್ರವನ್ನು ಅಂತಿಮಗೊಳಿಸುವುದಾಗಿ ಮುತಾಲಿಕ್ ಹೇಳಿದ್ದಾರೆ.

ರಾಜ್ಯದ ಇಂಧನ ಸಚಿವ ವಿ. ಸುನೀಲ್ ಕುಮಾರ್ ಪ್ರತಿನಿಧಿಸುವ ಉಡುಪಿ ಜಿಲ್ಲೆಯ ಕಾರ್ಕಳ ಕೂಡ ನಿರೀಕ್ಷಿತ ಕ್ಷೇತ್ರಗಳಲ್ಲಿ ಒಂದಾಗಿದೆ.

ತನ್ನ ಮತ್ತು ಇತರ ಸೇನಾ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ಹಾಕುವುದರ ಹಿಂದೆ ಸುನೀಲ್ ಕುಮಾರ್ ಇದ್ದಾರೆ ಎಂದು ಬಲಪಂಥೀಯ ಸಂಘಟನೆಯ ಮುಖ್ಯಸ್ಥ ಆರೋಪಿಸಿದ್ದಾರೆ.

ಯಾವಾಗಲೂ ಹಿಂದೂ ಕಾರ್ಯಕರ್ತರನ್ನು ಕೀಳಾಗಿ ಕಾಣುವ ಕಾಂಗ್ರೆಸ್‌ನ ಅದೇ ಸಾಲಿನಲ್ಲಿ ಬಿಜೆಪಿಯಿದೆ ಎಂದು ಅವರು ಹೇಳಿದ್ದಾರೆ.

ಕಾರ್ಕಳದ ಹೊರತಾಗಿ ಶೃಂಗೇರಿ, ಬೆಳಗಾವಿ ದಕ್ಷಿಣ, ಧಾರವಾಡ ಮತ್ತು ತೇರದಾಳ, ಜಮಖಂಡಿ (ಬಾಗಲಕೋಟೆ) ಕ್ಷೇತ್ರಗಳಿಗೂ ಚುನಾವಣೆಗೆ ಸ್ಪರ್ಧಿಸಲು ಚಿಂತನೆ ನಡೆದಿದೆ. ನೂರಾರು ಹಿಂದೂ ಕಾರ್ಯಕರ್ತರನ್ನು ಪೊಲೀಸರು 'ರೌಡಿಶೀಟರ್' ಎಂದು ಬ್ರಾಂಡ್ ಮಾಡಿ ಜೈಲಿಗೆ ಹಾಕಿದ್ದಾರೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರವು ಹಿಂದೂ ಕಾರ್ಯಕರ್ತರ ವಿರುದ್ಧದ ತಮ್ಮ ನಿಲುವನ್ನು ಬದಲಾಯಿಸಲು ಸಿದ್ಧವಾಗಿಲ್ಲದಿದ್ದರೆ, ಅವರು ಹಿಂದೂ ಬಹುಸಂಖ್ಯಾತರ ಬೆಂಬಲವನ್ನು ಕಳೆದುಕೊಳ್ಳುತ್ತಾರೆ ಎಂದರು.

SCROLL FOR NEXT