ರಾಜ್ಯ

ನಿಮ್ಮ ಖಾಲಿ ಸೈಟ್ ಸ್ವಚ್ಛವಾಗಿಡಿ ಅಥವಾ ಕ್ರಿಮಿನಲ್ ಕ್ರಮ ಎದುರಿಸಿ: ಬಿಬಿಎಂಪಿ ಎಚ್ಚರಿಕೆ!

Shilpa D

ಬೆಂಗಳೂರು: ಖಾಲಿ ನಿವೇಶನಗಳಲ್ಲಿ ತ್ಯಾಜ್ಯವಿದ್ದರೆ ಅದರ ಮಾಲೀಕರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಾಗಲಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ.

ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ತೆರವಿಗೆ ಈ ಹಿಂದೆ ದಂಡ ವಿಧಿಸಲಾಗುತ್ತಿತ್ತು. ಇದನ್ನು ಪುನಃ ಜಾರಿಗೆ ತರಲಾಗುತ್ತದೆ. ಇನ್ನೊಂದು ತಿಂಗಳ ಗಡುವು ನೀಡಲಾಗುತ್ತಿದ್ದು, ಅಷ್ಟರಲ್ಲಿ ಮಾಲೀಕರು ಖಾಲಿ ನಿವೇಶನದಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಬೇಕು ಎಂದು ‌ಬಿಬಿಎಂಪಿ ಕಸ ನಿರ್ವಹಣಾ ವಿಭಾಗದ ವಿಶೇಷ ಆಯುಕ್ತ ಕೆ.ಹರೀಶ್‌ ಕುಮಾರ್‌ ಶುಕ್ರವಾರ ತಿಳಿಸಿದರು.

ಖಾಲಿ ನಿವೇಶನದಲ್ಲಿ ತ್ಯಾಜ್ಯವಿದ್ದರೆ ಅದನ್ನು ಬಿಬಿಎಂಪಿ ತೆರವು ಮಾಡುತ್ತದೆ. ಇದಕ್ಕೆ ಚದರ ಅಡಿಗೆ 2 ಶುಲ್ಕ ವಿಧಿಸಲಾಗುತ್ತದೆ. ಎರಡನೇ ಬಾರಿಯೂ ಶುಲ್ಕ ವಿಧಿಸಿ ತೆರವು ಮಾಡಲಾಗುತ್ತದೆ. ಮೂರನೇ ಬಾರಿ ಇದು ಮುಂದುವರಿದರೆ ಮಾಲೀಕರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ ಎಂದು ವಿವರನೀಡಿದರು.

ಶುಲ್ಕ ಕಟ್ಟದಿದ್ದರೆ ಏನಾಗುತ್ತದೆ ಎಂದು ಸುಮ್ಮನಿರುವಂತಿಲ್ಲ. ಎರಡು ಬಾರಿ ವಿಧಿಸುವ ಶುಲ್ಕವನ್ನು ಆಸ್ತಿ ತೆರಿಗೆಗೆ ಸೇರಿಸಲಾಗುತ್ತದೆ. ಇದನ್ನು ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಲಾಗುತ್ತದೆ ಎಂದರು.

ಏಕಬಳಕೆ ಪ್ಲಾಸ್ಟಿಕ್‌ ನಿಷೇಧವನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ. ವಲಯಗಳಲ್ಲಿ ದಿಢೀರ್‌ ತಪಾಸಣೆ ಮಾಡಲಾಗುತ್ತದೆ. ಜೊತೆಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗುತ್ತದೆ. ಪ್ರತಿ ವಾರ, ಪ್ರತಿ ವಲಯದಲ್ಲೂ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಹರೀಶ್‌ಕುಮಾರ್‌ ತಿಳಿಸಿದರು.

ಸುತ್ತಲಿನ ವಾರ್ಡ್ ಎಂಜಿನಿಯರ್‌ಗಳು ಇಂತಹ ಆಸ್ತಿಗಳ ಮೇಲೆ ನಿಗಾ ಇಡಬೇಕು ಮತ್ತು ಈ ಬಗ್ಗೆ ಅಕ್ಕಪಕ್ಕದವರು ಮತ್ತು ನಿವಾಸಿಗಳಿಂದ ದೂರುಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಬಿಬಿಎಂಪಿಯ ಈ ನಿರ್ಧಾರವನ್ನು ಸ್ವಾಗತಿಸಿರುವ ಬೆಂಗಳೂರು ಪ್ರಜಾ ವೇದಿಕೆಯ ಅಧ್ಯಕ್ಷ ಡಿ ಎಸ್ ರಾಜಶೇಖರ್ ,ಎಲ್ಲಾ ಕಸವನ್ನು ಮೂಲದಲ್ಲಿಯೇ ಸಂಗ್ರಹಿಸಿದರೆ ಮತ್ತು ಪೌರಕಾರ್ಮಿಕರು ಮತ್ತು ಗುತ್ತಿಗೆದಾರರಿಗೆ ಯಾವುದೇ ಪಾವತಿ ಬಾಕಿ ಇಲ್ಲದಿದ್ದರೆ ಖಾಲಿ ಸೈಟ್‌ಗಳಿಗೆ ಕಸ ಬರುವುದು ಕಡಿಮೆಯಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಖಾಲಿ ನಿವೇಶನಗಳಿಗೆ ಬೇಲಿ ಹಾಕದ ಮಾಲೀಕರಿಗೆ ಮಾತ್ರ ದಂಡ ವಿಧಿಸುವುದನ್ನು ನಾನು ಬೆಂಬಲಿಸುತ್ತೇನೆ. ಆದರೆ, ಅವರು ತಮ್ಮ ನಿವೇಶನಕ್ಕೆ ಸರಿಯಾಗಿ ಬೇಲಿ ಹಾಕಿದ್ದರೆ ಅವರಿಗೆ ದಂಡ ವಿಧಿಸುವುದು ಅನ್ಯಾಯ. ಬಿಬಿಎಂಪಿ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು,'' ಎಂದು ಬೆಂಗಳೂರು ನವ ನಿರ್ಮಾಣ ಪಕ್ಷದ ಶ್ರೀಕಾಂತ್ ನರಸಿಂಹನ್ ಹೇಳಿದ್ದಾರೆ.

SCROLL FOR NEXT