ರಾಜ್ಯ

ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಹೊಸ ಸಂಚಾರ ನಿಯಮ ಜಾರಿ!

Srinivas Rao BV

ಬೆಂಗಳೂರು: ಅತಿ ಹೆಚ್ಚು ಟ್ರಾಫಿಕ್ ಜಾಮ್ ಆಗುವ ಪ್ರದೇಶಗಳ ಪಟ್ಟಿಯಲ್ಲಿರುವ ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಟ್ರಾಫಿಕ್ ಪೊಲೀಸರು ಹೊಸ ಸಂಚಾರ ನಿಯಮ ಜಾರಿಗೆ ತರಲಿದ್ದಾರೆ. 

ಬಿಬಿಎಂಪಿ, ಬಿಎಂಆರ್ ಸಿಎಲ್, ಎನ್ ಹೆಚ್ಎಐ ಜೊತೆಗೂಡಿ ಸಂಚಾರ ಮಾದರಿ (traffic pattern) ನ್ನು  ಅಧ್ಯಯನ ಮಾಡಿರುವ ಸಂಚಾರ ವಿಭಾಗದ ಪೊಲೀಸರು ವಾಹನ ದಟ್ಟಣೆಯನ್ನು ತಡೆಗಟ್ಟಲು ಯಲಹಂಕ, ಕೊಡಿಗೆಹಳ್ಳಿ, ಕೆಂಪಾಪುರ, ಜಕ್ಕೂರುಗಳಿಂದ ನಗರಕ್ಕೆ ಪ್ರವೇಶಿಸುವ ವಾಹನಗಳಿಗೆ ನೇರವಾಗಿ ಹೆಬ್ಬಾಳ ಮೇಲ್ಸೇತುವೆಗೆ ಸಂಪರ್ಕ ಕಲ್ಪಿಸದೇ ಇರಲು ತೀರ್ಮಾನಿಸಲಾಗಿದೆ. ಮೇಲೆ ಹೇಳಿದ ಪ್ರದೇಶಗಳಿಂದ ನಗರಕ್ಕೆ ಪ್ರವೇಶಿಸಬೇಕಾದಲ್ಲಿ ವಾಹನ ಸವಾರರು ಹೆಬ್ಬಾಳ ವೃತ್ತದ ಬಳಿ ಲೂಪ್ ರ್ಯಾಂಪ್ ಮೂಲಕ ಹಾದು ನಗರಕ್ಕೆ ಪ್ರವೇಶಿಸಬೇಕಾಗುತ್ತದೆ.

ಹೆಬ್ಬಾಳ ವೃತ್ತದಲ್ಲಿ ಬಸ್ ಗಳ ನಿಲುಗಡೆಯಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿತ್ತು ಎಂಬ ಆರೋಪಗಳೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಎಲಿವೇಟೆಡ್ ಕಾರಿಡಾರ್ ಮೇಲೆ ನಗರ ನಿಲ್ದಾಣದೆಡೆಗೆ ಬರುವ ಬಸ್ ಗಳು ಲೂಪ್ ರ್ಯಾಂಪ್ ಗಿಂತಲೂ ಮುನ್ನ ನಿಗದಿತ ಬಸ್ ಬೇ ಬಳಿ ನಿಲುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಏರ್ಪೋರ್ಟ್ ಹೆದ್ದಾರಿಯಿಂದ ಬರುವ ವಾಹನಗಳ ಸಂಚಾರ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ಹಿಂದಿನಂತೆಯೇ ಅವುಗಳು ಹೆಬ್ಬಾಳ ಮೇಲ್ಸೇತುವೆಯ ಮೂಲಕವೇ ಸಂಚರಿಸಬಹುದಾಗಿದೆ.

ಏರ್ ಪೋರ್ಟ್ ಹೆದ್ದಾರಿಯಿಂದ ಬರುವ ವಾಹನಗಳಿಗೆ ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ ಕೆಆರ್ ಪುರಂ ಅಥವಾ ತುಮಕೂರು ರಸ್ತೆಯೆಡೆಗೆ ಹೋಗಲು ಅನುಮತಿ ನೀಡಲಾಗುತ್ತದೆ. ಈ ನಡುವೆ ಕೆಂಪಾಪುರಕ್ಕೆ ತೆರಳುವವರು ವಿದ್ಯಾಶಿಲ್ಪ/ ಯಲಹಂಕ ಬೈ ಪಾಸ್ ಬಳಿ ಸರ್ವೀಸ್ ರಸ್ತೆಯಲ್ಲಿ ತೆರಳಬೇಕಾಗುತ್ತದೆ.

ಶುಕ್ರವಾರ (ಜೂ.08) ರಂದು ಬೆಳಿಗ್ಗೆ 6 ಗಂಟೆಯಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಈ ಹೊಸ ವ್ಯವಸ್ಥೆಯಿಂದ ಸರ್ವೀಸ್ ರಸ್ತೆಗಳಲ್ಲಿ ಅವ್ಯವಸ್ಥೆ ಉಂಟಾಗಲಿದೆ ಎಂಬ ಬಗ್ಗೆಯೂ ಸಂಚಾರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. 

SCROLL FOR NEXT