ರಾಜ್ಯ

14 ವರ್ಷ ಮೇಲ್ಪಟ್ಟ ಕೋಣದ ವಧೆಗೆ ಕಾನೂನಿನಲ್ಲಿ ಅವಕಾಶ ಇದೆ, ಸರ್ಕಾರ ಸೂಕ್ತ ಸ್ಪಷ್ಟನೆ ನೀಡಬೇಕು: ಯು.ಟಿ ಖಾದರ್

Shilpa D

ಮಂಗಳೂರು: ಕಾನೂನು ವ್ಯಾಪ್ತಿಯಲ್ಲಿ ಪ್ರಾಣಿವಧೆಗೆ ಅವಕಾಶವಿದೆ, ಅದರ ಸ್ಪಷ್ಟ ನಿಯಮಾವಳಿ ಸರ್ಕಾರ ಜನತೆಗೆ ತಿಳಿಸಬೇಕು, ಯಾರೂ ಕಾನೂನು ಮೀರಿ ನಡೆಯಬಾರದು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಯು.ಟಿ. ಖಾದರ್‌ ಹೇಳಿದ್ದಾರೆ.

ಅಕ್ರಮ ಗೋಹತ್ಯೆ ಮಾಡಿದರೆ ಆಸ್ತಿ ಮುಟ್ಟುಗೋಲು ಹಾಕುವ ಶಾಸಕ ಡಾ. ಭರತ್‌ ಶೆಟ್ಟಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಖಾದರ್‌, ಯಾರೂ ಕಾನೂನು ಮೀರಿ ಹೋಗಬಾರದು. ಬಕ್ರೀದ್ ಹಿನ್ನೆಲೆಯಲ್ಲಿ ಕುರ್ಬಾನಿಯಾಗಿ 14 ವರ್ಷ ಮೇಲ್ಪಟ್ಟ ಕೋಣದ ವಧೆಗೆ ಕಾನೂನಿನಲ್ಲಿ ಅವಕಾಶ ಇದೆ. ಹಾಗಾಗಿ ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಈ  ಬಗ್ಗೆ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದರು.

ಪಿಎಸ್‌ಐ ಹಗರಣದ ಕುರಿತಂತೆ ಸಿಐಡಿಗೆ ಛೀಮಾರಿ ಹಾಕಿ ಅಕ್ರಮದ ತನಿಖೆಗೆ ಹೈಕೋರ್ಟ್ ಆದೇಶ ನೀಡುವುದು ಸರಕಾರದ ವೈಫಲ್ಯವಾಗಿದ್ದು, ನ್ಯಾಯಾಧೀಶರಿಗೆ ವರ್ಗಾವಣೆಯ ಬೆದರಿಕೆ ಹಾಕುವ ಪ್ರಕ್ರಿಯೆ ಗಂಭೀರ ವಿಚಾರ ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಿಂದ ತನಿಖೆಯಾಗಲಿ  ಎಂದು ಒತ್ತಾಯಿಸಿದ್ದಾರೆ. ಸಂವಿಧಾನದ ಆಶಯ ರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿರುವುದರ ಲಕ್ಷಣ. ಇದನ್ನು ನಾವು ಖಂಡಿಸುತ್ತೇವೆ ಹಾಗೂ ಈ ಕುರಿತು ಸರಕಾರ ತನಿಖೆಗೆ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬ ಆಚರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ದಾವಣಗೆರೆಯಲ್ಲಿ ಸಿದ್ದರಾಮೋತ್ಸವ  ನಡೆಯಲಿದೆ. ಬೆಂಗಳೂರಿನಲ್ಲಿ ಏರ್ಪಡಿಸಿರುವ ಸ್ವಾತಂತ್ರ್ಯದ ನಡಿಗೆ ಕಾರ್ಯಕ್ರಮದಲ್ಲಿ 75 ಸಾವಿರ ಜನ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದು ಶಕ್ತಿ ಪ್ರದರ್ಶನಕ್ಕಾಗಿ ಅಲ್ಲ, ಬದಲು ಪಕ್ಷದ ಒಗ್ಗಟ್ಟಿನ ಪ್ರದರ್ಶನಕ್ಕಾಗಿ. ಕಾಂಗ್ರೆಸ್‌ನ ಒಗ್ಗಟ್ಟು ನೋಡಿ ಬಿಜೆಪಿ ಪಾಳೆಯದಲ್ಲಿ ಆತಂಕ ಮೂಡಿದೆ’ ಎಂದರು.

SCROLL FOR NEXT