ಬೆಂಗಳೂರು: ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಪ್ರಧಾನ ಮತ್ತು ಸಾರ್ವಭೌಮ. ಕನ್ನಡಿಗರು ಕನ್ನಡ ಬರೆಯುವಾಗ, ಮಾತನಾಡುವಾಗ, ನಿತ್ಯ ವ್ಯವಹಾರದಲ್ಲಿ ಕನ್ನಡ ಪದಗಳನ್ನು ತಪ್ಪಿಲ್ಲದೆ ಬಳಸಬೇಕಾದ್ದು ಕರ್ತವ್ಯ.
ಇನ್ನು ಕರ್ನಾಟಕ ಸರ್ಕಾರದ ಆದೇಶ, ಕಡತಗಳಲ್ಲಂತೂ ಕನ್ನಡ ಶಬ್ದ ಬಳಕೆ ತಪ್ಪಾದರೆ ಅದು ತೀರಾ ಅಸಂಬದ್ಧವಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ-ವಿಡಿಯೊ ಮಾಡದಂತೆ ನಿನ್ನೆ ಸರ್ಕಾರ ಆದೇಶ ಹೊರಡಿಸಿ ಕೆಲವೇ ಗಂಟೆಗಳಲ್ಲಿ ಆದೇಶ ಹಿಂಪಡೆದು ನಗೆಪಾಟಲಿಗೀಡಾದ್ದು ಗೊತ್ತೇ ಇದೆ. ಈ ಬಗ್ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಟೀಕೆ ಮಾಡುತ್ತಿದ್ದಾರೆ.
ಅದಷ್ಟೇ ಅಲ್ಲ, ಸರ್ಕಾರ ಆದೇಶವನ್ನು ಹಿಂಪಡೆದು ಹೊರಡಿಸಿದ ಆದೇಶದಲ್ಲಿ ಅನೇಕ ಕನ್ನಡ ಪದಗಳು ತಪ್ಪಾಗಿ ಮುದ್ರಣವಾಗಿವೆ. ಈ ಬಗ್ಗೆ ಕೂಡ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರವನ್ನು, ಮುಖ್ಯಮಂತ್ರಿಗಳನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ಕಾರದ ನಡಾವಳಿ, ಪ್ರಸ್ತಾವನೆ, ಭಾಗ, ಮೇಲೆ, ಆಡಳಿತ, ಅಷ್ಟೇ ಏಕೆ ಸ್ವತಃ ಕರ್ನಾಟಕ ಪದವೇ ತಪ್ಪಾಗಿ ಮುದ್ರಣಗೊಂಡಿದೆ. ಇಲಾಖೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಇಷ್ಟೊಂದು ಬೇಜವಬ್ದಾರರೇ ಎಂದು ಕೇಳಿದರೆ ಇನ್ನು ಕೆಲವರು ಮುಖ್ಯಮಂತ್ರಿ ಬೊಮ್ಮಾಯಿಯವರೇ ನಿಮ್ಮ ಸರ್ಕಾರದ ಅಧಿಕಾರಿಗಳಿಗೆ ಮೊದಲು ಕನ್ನಡ ಕಲಿಸಿ, ಕನ್ನಡ ತರಗತಿ ಪ್ರಾರಂಭಿಸಿ ಎಂದು ಕೇಳುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರ ಯು ಟರ್ನ್: ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೊಗೆ ನಿರ್ಬಂಧ ಆದೇಶ ಮಧ್ಯರಾತ್ರಿ ವಾಪಸ್!
ಸರ್ಕಾರದ ಕನ್ನಡವನ್ನು ಇಷ್ಟೊಂದು ಅಸಡ್ಡೆಯಾಗಿ ಬಳಸಿರುವುದನ್ನು ವಿರೋಧಿಸಿ ಸರ್ಕಾರವೇ ಕನ್ನಡದ ಕಗ್ಗೊಲೆ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಪ್ರತಿಭಟನೆ ಮಾಡುತ್ತಿದೆ.
ತಿದ್ದುಪಡಿ: ಸೋಷಿಯಲ್ ಮೀಡಿಯಾ, ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ನಂತರ ತಿದ್ದುಪಡಿ ಮಾಡಿ ಆದೇಶ ಹೊರಡಿಸಲಾಗಿದೆ.
ಆದೇಶ: