ರಾಜ್ಯ

ಬೆಂಗಳೂರು: ಗ್ಯಾಸ್ ಕಟ್ಟರ್ ಬಳಿಸಿ ಎಟಿಎಂಗೆ ಕನ್ನ ಹಾಕುತ್ತಿದ್ದ ಖದೀಮನ ಬಂಧನ!

Manjula VN

ಬೆಂಗಳೂರು: ಗ್ಯಾಸ್ ಕಟರ್ ಬಳಸಿ ಹಣ ತುಂಬಿದ ಎಟಿಎಂ ಘಟಕಗಳಲ್ಲಿ ರಾತ್ರಿ ವೇಳೆ ಹಣ ದೋಚುತ್ತಿದ್ದ ವೃತ್ತಿಪರ ಖದೀಮನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.

ಪಂಜಾಬ್ ಮೂಲದ ಸಮರ್ಜೋತ್ ಸಿಂಗ್ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ಎರಡು ಸಿಲಿಂಡರ್‌ಗಳು, ಗ್ಯಾಸ್ ಕಟ್ಟರ್‌ಗಳು, ಏರ್ ಫಿಲ್ಟರ್ ಮಾಸ್ಕ್, ಆಕ್ಸಿಜನ್ ಸಿಲಿಂಡರ್ ಮತ್ತು ಇತರ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹೆಸರಘಟ್ಟ ರಸ್ತೆಯಲ್ಲಿ ಎಟಿಎಂ ಯಂತ್ರ ಒಡೆಯಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಬಂಧನಕ್ಕೊಳಪಡಿಸಿದ್ದಾರೆ.

5 ದಿನಗಳಿಂದ ಎಟಿಎಂ ಯಂತ್ರವನ್ನು ಒಡೆಯಲು ಸಿಂಗ್ ಯತ್ನಿಸುತ್ತಿದ್ದ. ಸಪ್ತಗಿರಿ ಕಾಲೇಜು ಸಮೀಪದ ಕೆನರಾ ಬ್ಯಾಂಕ್ ಎಟಿಎಂಗೆ ರಾತ್ರಿ 11 ಗಂಟಗೆ ಬರುತ್ತಿದ್ದ ಆರೋಪಿ ಬೆಳಿಗ್ಗೆ 5 ಗಂಟೆಗೆ ಹೊರಗೆ ಬರುತ್ತಿದ್ದ. ಇದನ್ನು ಎಟಿಎಂ ನಿರ್ವಹಣಾ ಸಿಬ್ಬಂದಿಗಳು ಗಮನಿಸಿದ್ದು, ಸಿಸಿಟಿವಿ ಪರಿಶೀಲನೆ ನಡೆಸಿದಾಗ ಸಿಂಗ್ ಯಂತ್ರವನ್ನು ಒಡೆಯಲು ಯತ್ನ ನಡೆಸುತ್ತಿರುವುದು ಕಂಡು ಬಂದಿದೆ.

ಇದರಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಎಟಿಎಂ ಬಳಿ ಬಚ್ಚಿಟ್ಟುಕೊಂಡು ಆರೋಪಿಗಾಗಿ ಕಾದಿದ್ದಾರೆ. ಎಂದಿನಂತೆ ಎಟಿಎಂಗೆ ಆರೋಪಿ ಬಂದಿದ್ದು, ಕಳ್ಳತನ ಮಾಡಲು ಯತ್ನಿಸಿದಾಗ ಅಲ್ಲಿಯೇ ಇದ್ದ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.

ಈ ಹಿಂದೆ ಕೂಡ ಆರೋಪಿಯನ್ನು ಪರಪ್ಪನ ಅಗ್ರಹಾರ, ಜಾಲಹಳ್ಳಿ, ಸುಬ್ರಹ್ಮಣ್ಯಪುರ, ಎಂಐಸಿಒ ಲೇಔಟ್ ಹಾಗೂ ಸಿಕೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

SCROLL FOR NEXT