ರಾಜ್ಯ

'ಅಗ್ನಿಪಥ್'ಗೆ ವಿರೋಧ: ಧಾರವಾಡದಲ್ಲಿ ಯುವಕರಿಂದ ಮೆರವಣಿಗೆ, ಕಲ್ಲು ತೂರಾಟ; ಕೇರಳದಲ್ಲೂ ವ್ಯಾಪಕ ಪ್ರತಿಭಟನೆ

Sumana Upadhyaya

ಬೆಳಗಾವಿ/ತಿರುವನಂತಪುರ: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕರ್ನಾಟಕಕ್ಕೂ ಕಾಲಿಟ್ಟಿದೆ. ಇಂದು ಶನಿವಾರ ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಸುಮಾರು 200 ಯುವಕರು ಯೋಜನೆ ಖಂಡಿಸಿ ರ್ಯಾಲಿ ನಡೆಸಿದರು. 

ಬಸ್ ಮೇಲೆ ಕಲ್ಲು ತೂರಾಟ ನಡೆಯಿತು. ಉದ್ರಿಕ್ತ ಯುವಕರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು, ಧಾರವಾಡದ ಕಲಾಭವನದಿಂದ ಹಳೆ ಡಿಎಸ್ ಪಿ ಸರ್ಕಲ್ ವರೆಗೆ ರ್ಯಾಲಿ ನಡೆಸಲಾಗಿತ್ತು.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಕೂಡ ಅಗ್ನಿಪಥ್​​ ವಿರೋಧಿ ಹೋರಾಟ ನಡೆಸುತ್ತಿದ್ದು, ಶಾಸಕಿ ಅಂಜಲಿ ನಿಂಬಾಳ್ಕರ್​​​​ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ . ಜೂನ್​​​​​ 20ರಂದು ಖಾನಾಪುರ ಬಂದ್​ಗೂ ಕರೆ ನೀಡಿದ್ಧಾರೆ.

ಕೇರಳದಲ್ಲಿಯೂ ಭಾರೀ ಪ್ರತಿಭಟನೆ: ಸಶಸ್ತ್ರ ಪಡೆಗಳಿಗೆ ಕೇಂದ್ರ ಸರ್ಕಾರದ ವಿವಾದಾತ್ಮಕ ನೇಮಕಾತಿ ಯೋಜನೆಯನ್ನು ವಿರೋಧಿಸಿ ನೂರಾರು ಯುವಕರು ಬೀದಿಗಿಳಿದ ಸಂದರ್ಭದಲ್ಲಿ ಅಗ್ನಿಪಥ್ ವಿರುದ್ಧ ನಡೆಯುತ್ತಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಕೇರಳದಲ್ಲೂ ಅದರ ಅಲೆಗಳನ್ನು ಕಂಡುಬಂದವು. ಶನಿವಾರ ತಿರುವನಂತಪುರಂ ಮತ್ತು ಕೋಝಿಕ್ಕೋಡ್‌ನಲ್ಲಿ ಬೃಹತ್ ಪ್ರತಿಭಟನೆಗಳನ್ನು ಆಯೋಜಿಸಲಾಗಿತ್ತು.

ರಾಜ್ಯ ರಾಜಧಾನಿಯಲ್ಲಿ, ಪ್ರತಿಭಟನಾಕಾರರು ತಂಪನೂರಿನಿಂದ ರಾಜಭವನದವರೆಗೆ ಮೆರವಣಿಗೆ ನಡೆಸಿದರು. ಕೋಝಿಕ್ಕೋಡ್‌ನಲ್ಲಿ ಇದೇ ರೀತಿಯ ಪ್ರತಿಭಟನೆಯನ್ನು ರೈಲ್ವೇ ನಿಲ್ದಾಣದ ಮುಂದೆ ನಡೆಸಲಾಯಿತು.

ಇಂದು ಬೆಳಗ್ಗೆ 9:30 ರ ಸುಮಾರಿಗೆ ಸುಮಾರು 500 ಯುವಕರು ತಂಪನೂರು ರೈಲು ನಿಲ್ದಾಣದ ಮುಂದೆ ಜಮಾಯಿಸಿದರು. ಕ್ರಮೇಣ, ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಯಿತು, ಪ್ರತಿಭಟನಾ ನಿರತ ಯುವಕರು ಸಶಸ್ತ್ರ ಪಡೆಗಳಲ್ಲಿ ಉದ್ಯೋಗ ನಿರಾಕರಿಸಿದ್ದಕ್ಕೆ ತಮ್ಮ ನೋವನ್ನು ವ್ಯಕ್ತಪಡಿಸಿದರು. ಅವರಲ್ಲಿ ಹೆಚ್ಚಿನವರು 2021 ರಲ್ಲಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಮುಂದಿನ ಸುತ್ತಿನ ನೇಮಕಾತಿಗಾಗಿ ಕಾಯುತ್ತಿದ್ದಾರೆ. ಅವರ ಬೇಡಿಕೆಯೆಂದರೆ, ಮೊದಲು ನಿಗದಿಪಡಿಸಿದ ಮತ್ತು ನಂತರ ಆರು ಬಾರಿ ಮುಂದೂಡಲ್ಪಟ್ಟ ಸಂಯೋಜಿತ ಪ್ರವೇಶ ಪರೀಕ್ಷೆಯನ್ನು (CEE) ಶೀಘ್ರವಾಗಿ ನಡೆಸಬೇಕೆಂಬುದಾಗಿತ್ತು.

ಪ್ರತಿಭಟನಾಕಾರರು ರೈಲು ಸೇರಿದಂತೆ ಸಾರ್ವಜನಿಕ ಸಾರಿಗೆ, ಆಸ್ತಿಪಾಸ್ತಿಯನ್ನು ಗುರಿಯಾಗಿಟ್ಟುಕೊಂಡು ತಮ್ಮ ಆಕ್ರೋಶ ಹೊರಹಾಕುತ್ತಿರುವುದರಿಂದ 300ಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಇದುವರೆಗೆ 200ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. 

ಅಗ್ನಿಪಥ್ ಯೋಜನೆ ಜಾರಿ ವಿರೋಧಿಸಿ ಯುವಕರು ಹಿಂಸಾಚಾರದಲ್ಲಿ ತೊಡಗಿ ರೈಲ್ವೆ ಆಸ್ತಿ-ಪಾಸ್ತಿಗಳನ್ನು ಹಾನಿ ಮಾಡದಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ. ರೈಲ್ವೆ ಆಸ್ತಿ-ಪಾಸ್ತಿ ದೇಶದ್ದಾಗಿದ್ದು, ರಾಷ್ಟ್ರಕ್ಕೆ ಉತ್ತಮ ಸೇವೆ ಒದಗಿಸುತ್ತಿದೆ. ಕೇಂದ್ರ ಸರ್ಕಾರ ಸಹ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಅಗ್ನಿಪಥ್ ವಿರೋಧಿಸಿ ದೇಶಾದ್ಯಂತ ಗಲಭೆ ಹಿನ್ನೆಲೆ ಕರ್ನಾಟಕದ ಎಲ್ಲಾ ರೈಲ್ವೆ ನಿಲ್ದಾಣದಲ್ಲಿ ಕಟ್ಟೆಚ್ಚರ ಮಾಡಲಾಗಿದೆ. ಎಲ್ಲಾ ರೈಲ್ವೆ ನಿಲ್ದಾಣಕ್ಕೆ ಹೆಚ್ಚುವರಿ ಪೊಲೀಸ್ ಭದ್ರತೆ ನೀಡಿದ್ದು ರಾಜ್ಯದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ ಎಲ್ಲಾ ಜಂಕ್ಷನ್​​ಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

SCROLL FOR NEXT