ಬೆಂಗಳೂರು: ಇದೇ 20 ಮತ್ತು 21ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು ಅವರ ಕಾರ್ಯಕ್ರಮಗಳು ನಿಗದಿಯಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಲ್ಲಿ ಭೇಟಿ ನೀಡಲಿರುವ ಕೇಂದ್ರಗಳಿಗೆ ಹೋಗಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಪ್ರಧಾನಿಯವರ ಕಾರ್ಯಕ್ರಮಗಳು ಅಚ್ಚುಕಟ್ಟಾಗಬೇಕು ಎಂಬ ಉದ್ದೇಶದಿಂದ ಬಿಜೆಪಿಯ ಹಿರಿಯ ನಾಯಕರು, ಸಂಪುಟದ ಸಹೋದ್ಯೋಗಿಗಳು ಮತ್ತು ಶಾಸಕರು, ಅಧಿಕಾರಿಗಳು ಸಹಕರಿಸಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಸಹ ತಪಾಸಣೆ ಮಾಡಿ ಮುಂಜಾಗ್ರತೆ, ಭದ್ರತೆ ಕೈಗೊಳ್ಳುತ್ತಿದೆ.
ಎಸ್ ಪಿಜಿಯವರ ಮಾರ್ಗದರ್ಶನದಲ್ಲಿ ಭದ್ರತೆ ವ್ಯವಸ್ಥೆಗಳು ನಡೆಯುತ್ತಿವೆ. ಜೂನ್ 20ರಂದು ಬೆಳಗ್ಗೆ 11.50ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಪ್ರಧಾನ ಮಂತ್ರಿಗಳು ಹೆಲಿಕಾಪ್ಟರ್ ಮೂಲಕ ಏರ್ ಕಮಾಂಡ್ ಗೆ ಬಂದು ನಂತರ ಐಐಎಸ್ಸಿಯಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.
ಐಐಎಸ್ಸಿಯಲ್ಲಿ ಬ್ರೈನ್ ಸೆಲ್ಸ್ ಡೆವಲಪ್ ಮೆಂಟ್ ಕೇಂದ್ರದ ಉದ್ಘಾಟನೆ, ಮೈಂಡ್ ಟ್ರೀ ಸಂಸ್ಥೆಯ ಸಂಶೋಧನಾ ಆಸ್ಪತ್ರೆಯ ಅಡಿಗಲ್ಲು ಕೇಂದ್ರದ ಉದ್ಘಾಟನೆ ನೆರವೇರಲಿದೆ. ಬೆಂಗಳೂರು ಮತ್ತು ಹೊರವಲಯಕ್ಕೆ ಸಂಪರ್ಕ ಕಲ್ಪಿಸುವ ಸಬ್ ಅರ್ಬನ್ ರೈಲ್ವೆಯ ಅಡಿಗಲ್ಲು ಸಮಾರಂಭವನ್ನು ಪ್ರಧಾನಿಯವರು ನೆರವೇರಿಸಲಿದ್ದಾರೆ. ಇದು ಬೆಂಗಳೂರು ಜನರಿಗೆ ಬಹಳ ದೊಡ್ಡ ಕಾಣಿಕೆಯಾಗಿದೆ, 6 ರೈಲ್ವೆ ಯೋಜನೆಗಳಿಗೆ, ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಸಹ ಅಡಿಗಲ್ಲು ಹಾಕಲಿದ್ದಾರೆ ಎಂದರು.
ನಂತರ ಬೇಸ್ ಗೆ ಹೋಗಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾಲಯದ ಉದ್ಘಾಟನೆ ನೆರವೇರಲಿದೆ ಎಂದರು.
ಜೂನ್ 21 ರಂದು ವಿಶ್ವಯೋಗ ದಿನಾಚಾರಣೆಯಲ್ಲಿ ಪಾಲ್ಗೊಳ್ಳಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಭದ್ರತಾ ಕಾರ್ಯಾಚರಣೆ ಚುರುಕುಗೊಂಡಿದ್ದು ಪ್ರಧಾನಿ ಮೋದಿ ಸಂಚರಿಸುವ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ.
ಮರದ ಪೋಲ್ ಗಳ ಮೂಲಕ ನಗರದ 100 ಅಡಿ ರಸ್ತೆ, ಏರ್ ಪೋರ್ಟ್ ರಸ್ತೆ, ಅರಮನೆ ಮುಂಭಾಗ, ಚಾಮುಂಡಿ ಬೆಟ್ಟದ ರಸ್ತೆಗಳಲ್ಲಿ ಸುಮಾರು 30 ಕಿ.ಮೀ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಸಂಚರಿಸುವ ವೇಳೆ ಈ ರಸ್ತೆಗಳು ಸಂಪೂರ್ಣ ಬಂದ್ ಆಗಲಿವೆ.