ರಾಜ್ಯ

ಬೆಂಗಳೂರು: ಪತ್ನಿಯನ್ನು ಕೊಂದು, ಮಗಳನ್ನು ಕೊಲ್ಲಲು ಯತ್ನಿಸಿದ ವ್ಯಕ್ತಿ ಬಂಧನ

Shilpa D

ಬೆಂಗಳೂರು: ತನ್ನ ಪತ್ನಿಯನ್ನು ಕೊಂದು 14 ವರ್ಷದ ಮಗಳನ್ನು ಕೊಲ್ಲಲು ಯತ್ನಿಸಿದ ವ್ಯಕ್ತಿಯೊಬ್ಬ ಘಟನೆಯ ಬಗ್ಗೆ ಸ್ವತಃ ಪೊಲೀಸರಿಗೆ ಮಾಹಿತಿ ನೀಡಿ ಶರಣಾಗಿದ್ದಾನೆ. ಬುಧವಾರ  ಮುಂಜಾನೆ ಮತ್ತಿಕೆರೆಯಲ್ಲಿ ಈ ಘಟನೆ ನಡೆದಿದೆ.

ಅನಸೂಯ (42) ಕೊಲೆಯಾದವರು. ತಂದೆಯಿಂದಲೇ ಚಾಕು ಇರಿತಕ್ಕೆ ಒಳಗಾಗಿರುವ 13 ವರ್ಷದ ಬಾಲಕಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರ್ದಾಕ್ಷಿಣ್ಯವಾಗಿ ಪತ್ನಿಯನ್ನು ಕೊಲೆಗೈದು, ಮಗಳ ಹತ್ಯೆಗೂ ಯತ್ನಿಸಿದ್ದ ಆರೋಪಿ ಧನೇಂದ್ರ ಬಾಬುವನ್ನು ಬಂಧಿಸಿರುವ ಯಶವಂತಪುರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಅನಸೂಯ ಅವರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಘಟನೆ ಸಂಬಂಧ ಕೊಲೆಯಾದ ಅನಸೂಯ ಸಹೋದರಿ ವಸುಂಧರಾ ಅವರು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಇನ್ಸ್‌ಪೆಕ್ಟರ್‌ ಸುರೇಶ್‌ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿ ಹೇಳಿದರು.

ಪತ್ನಿಗೆ ತಿಳಿಯದಂತೆ ಒಂದು ಲಕ್ಷ ರೂ. ಸಾಲ ಮಾಡಿಕೊಂಡಿದ್ದೆ. ಅದು ಇತ್ತೀಚೆಗೆ ಪತ್ನಿಗೆ ಗೊತ್ತಾಗಿ ಮಂಗಳವಾರ ರಾತ್ರಿ ಜಗಳ ನಡೆದಿತ್ತು. ಹೀಗಾಗಿ, ಪತ್ನಿ, ಮಗಳನ್ನು ಕೊಲೆ ಮಾಡಿ ನಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಪತ್ನಿಯನ್ನು ಕೊಲೆ ಮಾಡಿದ್ದೆ. ಮಗಳಿಗೂ ಚಾಕುವಿನಿಂದ ಇರಿದಿದ್ದು, ಆಕೆ ಮೃತಪಟ್ಟಿದ್ದಾಳೆ ಎಂದು ಭಾವಿಸಿದ್ದೆ. ಆದರೆ, ಆಕೆ ಬದುಕಿರುವುದು ಬೆಳಗ್ಗೆ ಗೊತ್ತಾಯಿತು. ನಾನು ಆತ್ಮಹತ್ಯೆ ಮಾಡಿಕೊಂಡರೆ ಮಗಳನ್ನು ನೋಡಿಕೊಳ್ಳುವವರು ಯಾರು ಎಂದು ಸಾಯಲಿಲ್ಲ' ಎಂದು ಆರೋಪಿ ಧನೇಂದ್ರ ಪ್ರಾಥಮಿಕ ವಿಚಾರಣೆ ವೇಳೆ ಹೇಳಿದ್ದಾನೆ. ಆದರೆ, ಕೊಲೆಗೆ ನಿಖರ ಕಾರಣ ಬೇರೆ ಇರುವ ಸಾಧ್ಯತೆಯಿದೆ. ಹೀಗಾಗಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

SCROLL FOR NEXT