ಬೆಂಗಳೂರು: ಒಂದೆಡೆ ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುವ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದೆಡೆ ಕರ್ನಾಟಕ ಕೃಷಿ ಬೆಲೆ ಆಯೋಗಕ್ಕೆ (ಕೆಎಪಿಸಿ) ಅಧ್ಯಕ್ಷರ ನೇಮಕಕ್ಕೆ ರಾಜ್ಯ ಸರ್ಕಾರ ಕಳೆದ ಕೆಲವು ತಿಂಗಳಿಂದ ತಲೆಕೆಡಿಸಿಕೊಂಡಿಲ್ಲ.
ಸರ್ಕಾರ ಮತ್ತು ರೈತರ ನಡುವೆ ಸಂಚಾಲಕರಾಗಿ ಕಾರ್ಯನಿರ್ವಹಿಸುವ ಅಧ್ಯಕ್ಷರು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನಿಗದಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
2014 ರಲ್ಲಿ ರಚನೆಯಾದ ಕರ್ನಾಟಕ ಕೃಷಿ ಬೆಲೆ ಆಯೋಗವು ಬೆಳೆ ಉತ್ಪಾದನೆ, ಸಾಗುವಳಿ ವೆಚ್ಚ, ಸಾಗಣೆ ಮತ್ತು ಬೆಳೆ ವಿಮೆ ಕುರಿತು ಕಾಲಕಾಲಕ್ಕೆ ರಾಜ್ಯ ಸರ್ಕಾರಕ್ಕೆ ಶಿಫಾರಸುಗಳನ್ನು ನೀಡುತ್ತದೆ. ಕಳೆದ ವರ್ಷ, ಕೋವಿಡ್ ನಂತರ, ಹನುಮನಗೌಡ ಬೆಳಗುರ್ಕಿ ನೇತೃತ್ವದ ಆಯೋಗವು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್ಡಿಆರ್ಎಫ್) ಅಡಿಯಲ್ಲಿ ಬೆಳೆ ನಷ್ಟ ಪರಿಹಾರವನ್ನು ಹೆಚ್ಚಿಸಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರವನ್ನು ಕೇಳಿತ್ತು.
ಈ ವರ್ಷದ ಜುಲೈನಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ಕೃಷಿ ಬೆಲೆ ಆಯೋಗ ಸೇರಿದಂತೆ ವಿವಿಧ ಆಯೋಗಗಳ ಅಧ್ಯಕ್ಷರ ಹುದ್ದೆಗಳನ್ನು ರದ್ದುಗೊಳಿಸಿತು. ಅಂದಿನಿಂದ, ಆಯೋಗವು ಸಕ್ರಿಯವಾಗಿಲ್ಲ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ. ಕರ್ನಾಟಕದಲ್ಲಿ 27 ಪ್ರಮುಖ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಅವುಗಳ ಸಾಗುವಳಿ ವೆಚ್ಚದ ವರದಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಎಂಎಸ್ಪಿ ನಿಗದಿಪಡಿಸಲು ಕಳುಹಿಸಬೇಕು.
ಇದನ್ನೂ ಓದಿ: ಕರ್ನಾಟಕ ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ: ಕೇವಲ ಶೇ.44ರಷ್ಟು ಸಿಬ್ಬಂದಿ, ರೈತರಿಗೆ ತಲುಪುತ್ತಿಲ್ಲ ಯೋಜನೆಗಳು
ಕೇಂದ್ರ ಸರ್ಕಾರವು ವರದಿಯನ್ನು ಸಲ್ಲಿಸದಿದ್ದರೂ ಸಹ MSP ನಿಗದಿಪಡಿಸುತ್ತದೆ. ವರದಿ ಕಳುಹಿಸಲು ನಾವು ಈಗಾಗಲೇ ಮೂರು ತಿಂಗಳು ತಡವಾಗಿದೆ, ಹೀಗಾಗಿ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಕೃಷಿ ವೆಚ್ಚದ ಸಮೀಕ್ಷೆಯು ಬೀಜಗಳು, ಗೊಬ್ಬರಗಳಿಗೆ ರೈತರು ಎಷ್ಟು ಖರ್ಚು ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತದೆ , ಅದರ ಆಧಾರದ ಮೇಲೆ ಬೆಲೆಯನ್ನು ಶಿಫಾರಸು ಮಾಡಲಾಗಿದೆ. "ನಮ್ಮ ವರದಿಯು ಕೇಂದ್ರಕ್ಕೆ ತಲುಪದಿದ್ದರೆ, ಅವರು ಹಿಂದಿನ ವರ್ಷದ ಬೆಲೆಯನ್ನು ನಿಗದಿಪಡಿಸಬಹುದು ಅದು ರೈತರಿಗೆ ನಷ್ಟವನ್ನುಂಟುಮಾಡುತ್ತದೆ" ಎಂದು ಮೂಲಗಳು ತಿಳಿಸಿವೆ.
ಕೆಲ ತಿಂಗಳ ಹಿಂದೆ ಸರಕಾರಕ್ಕೆ ಸಲ್ಲಿಸಿರುವ ವರದಿ ಪ್ರಕಾರ ಮಳೆಯಾಶ್ರಿತ, ನೀರಾವರಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಹೆಕ್ಟೇರ್ಗೆ ಈಗಿರುವ 6,800 ರೂ., 13,500 ಹಾಗೂ 18,000 ರೂ. ಬೆಲೆ ಸಮರ್ಪಕವಾಗಿಲ್ಲ. ಕೃಷಿ ಬೆಳೆಗಳಿಗೆ ಹೆಕ್ಟೇರ್ಗೆ 50 ಸಾವಿರ ಮತ್ತು ಬಹುವಾರ್ಷಿಕ ಬೆಳೆಗಳಿಗೆ 1 ಲಕ್ಷ ರೂ. ನೀಡಬೇಕು.
ಸರ್ಕಾರವು ಮುಂದಿನ ಅಧ್ಯಕ್ಷರನ್ನು ನೇಮಿಸುವವರೆಗೆ ಸದ್ಯಕ್ಕೆ ಕೃಷಿ ಇಲಾಖೆ ಕಾರ್ಯದರ್ಶಿಯನ್ನು ಅಧ್ಯಕ್ಷರನ್ನಾಗಿ ನೇಮಿಸುವಂತೆ ತಮ್ಮ ಇಲಾಖೆಯು ಮುಖ್ಯಮಂತ್ರಿಗಳಿಗೆ ಪತ್ರವನ್ನು ಕಳುಹಿಸಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.