ರಾಜ್ಯ

ಪ್ರಧಾನಿ ಮೋದಿ ನಾಳೆ ಬೆಂಗಳೂರಿಗೆ: ಯಾವ ಸಮಯಕ್ಕೆ ಏನು ಕಾರ್ಯಕ್ರಮ, ಎಲ್ಲೆಲ್ಲಿ ಸಂಚಾರ ನಿರ್ಬಂಧ, ಇಲ್ಲಿದೆ ಮಾಹಿತಿ...

Sumana Upadhyaya

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಾಳೆ ರಾಜಧಾನಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ (PM Narendra Modi Bengaluru visit). ಈ ಸಂದರ್ಭದಲ್ಲಿ ಅವರ ಮೂರು ಅಧಿಕೃತ ಕಾರ್ಯಕ್ರಮಗಳು ನಿಗದಿಯಾಗಿವೆ.

ಅದು, ನಾಳೆ ಕನಕದಾಸ ಜಯಂತಿ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಕವಿ-ಸಂತ ಕನಕದಾಸರಿಗೆ ಪುಷ್ಪ ನಮನ ಸಲ್ಲಿಕೆ ಕಾರ್ಯಕ್ರಮ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಹಸಿರು ನಿಶಾನೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಟರ್ಮಿನಲ್ 2 ಉದ್ಘಾಟನೆ ಮತ್ತು ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರ ಪ್ರತಿಮೆಯನ್ನು ಅನಾವರಣ. 

ಪ್ರಧಾನಿ ಮೋದಿಯವರ ಬೆಂಗಳೂರು ಭೇಟಿಯ ನಿಮಿಷ-ನಿಮಿಷದ ವಿವರ ಹೀಗಿದೆ: 

  • ಪ್ರಧಾನಿ ಮೋದಿಯವರು ಬೆಳಗ್ಗೆ 10 ಗಂಟೆಗೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಬಳಿಕ ರಸ್ತೆ ಮೂಲಕ ವಿಧಾನಸೌಧಕ್ಕೆ ತೆರಳಲಿದ್ದಾರೆ. ಬೆಳಗ್ಗೆ 10.30ಕ್ಕೆ ಜಗದ್ಗುರು ನಿರಂಜನಾನಂದ ಪುರಿ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಕನಕದಾಸರು ಮತ್ತು ವಾಲ್ಮೀಕಿಯವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸುವರು.
  • 10.40ರ ಸುಮಾರಿಗೆ ಮೋದಿ ಅವರು ತಮ್ಮ ಬೆಂಗಾವಲು ಪಡೆ ವಾಹನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ತೆರಳಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ನ್ನು ಪ್ಲಾಟ್‌ಫಾರ್ಮ್ 7 ರಲ್ಲಿ ಚೆನ್ನೈ ಕಡೆಗೆ ಸಂಚರಿಸುವ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಪ್ಲಾಟ್‌ಫಾರ್ಮ್ 8 ರಿಂದ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ನಂತರ ಚಾಲನೆ ನೀಡುವರು. 
  • ನಂತರ ಬೆಳಗ್ಗೆ 11.10ರ ಸುಮಾರಿಗೆ ರಸ್ತೆ ಮೂಲಕ ಹೆಬ್ಬಾಳದಲ್ಲಿರುವ ಏರ್‌ಫೋರ್ಸ್ ಟ್ರೈನಿಂಗ್ ಕಮಾಂಡ್ ಸೆಂಟರ್‌ಗೆ ತೆರಳಲಿದ್ದಾರೆ. ಅಲ್ಲಿ ವೀಕ್ಷಣೆ ಮಾಡಿ ಹೆಲಿಕಾಪ್ಟರ್ ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ ಮಧ್ಯಾಹ್ನ 12.10 ರ ಸುಮಾರಿಗೆ ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆಯನ್ನು ಸಮರ್ಪಿಸಲಿದ್ದಾರೆ. 
  • ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿಮಾನ ನಿಲ್ದಾಣದ ಬಳಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಷಣ ಮಾಡಲಿದ್ದಾರೆ. ಮೋದಿಯವರು ಮಧ್ಯಾಹ್ನ 1.10ರ ಸುಮಾರಿಗೆ ಅಟಲ್ ಮಿಷನ್ ಫಾರ್ ರಿಜುವೆನೇಶನ್ ಮತ್ತು ಅರ್ಬನ್ ಟ್ರಾನ್ಸ್‌ಫರ್ಮೇಷನ್ (ಅಮೃತ್ ಯೋಜನೆ) 2.0 ಯೋಜನೆಯನ್ನು ಉದ್ಘಾಟಿಸಲಿದ್ದಾರೆ, ಮಧ್ಯಾಹ್ನ 1.35 ರ ಸುಮಾರಿಗೆ ಮೋದಿಯವರು ಭಾಷಣ ಮಾಡಲಿದ್ದಾರೆ. 

ಸಂಚಾರ ನಿರ್ಬಂಧ: ಪ್ರಧಾನಿ ಮೋದಿಯವರ ಭೇಟಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಂಚಾರ ನಿರ್ಬಂಧಗಳು ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅನ್ವಯವಾಗಲಿದೆ. ಸಿಟಿಒ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ವೃತ್ತ, ಅರಮನೆ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ, ಏರ್‌ಪೋರ್ಟ್ ಎಲಿವೇಟೆಡ್ ಕಾರಿಡಾರ್, ಮಹಾರಾಣಿ ಸೇತುವೆ, ಶೇಷಾದ್ರಿ ರೈಲು ನಿಲ್ದಾಣದ ಪ್ರವೇಶ ದ್ವಾರದವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. 

ಮೆಜೆಸ್ಟಿಕ್ ನ ಶಾಂತಲಾ ಜಂಕ್ಷನ್‌ನಿಂದ ಮೈಸೂರು ಬ್ಯಾಂಕ್ ವೃತ್ತದಿಂದ ಕೆ ಜಿ ರಸ್ತೆ, ಖೋಡೆ ಅಂಡರ್‌ಪಾಸ್‌ನಿಂದ ವಾಟಾಳ್ ನಾಗರಾಜ್ ಟೋಡ್‌ನಲ್ಲಿ ಪಿಎಫ್ ಕಚೇರಿ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ನಿರ್ಬಂಧವಿರುತ್ತದೆ.

SCROLL FOR NEXT