ರಾಜ್ಯ

ಒಂದೇ ಸೂರಿನಡಿ ಸರ್ಕಾರಿ ಕಚೇರಿಗಳ ತರಲು 25 ಮಹಡಿಗಳ ಅವಳಿ ಗೋಪುರ: ಟೆಂಡರ್ ಕರೆಯಲು ಸರ್ಕಾರ ಸಿದ್ಧತೆ!

Manjula VN

ಬೆಂಗಳೂರು: ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ 25 ಮಹಡಿಗಳ ಅವಳಿ ಗೋಪುರ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಜಾಗತಿಕ ಟೆಂಡರ್‌ಗಳನ್ನು ಕರೆಯಲು ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ವಿಕಾಸ ಸೌಧದ ಪಕ್ಕದಲ್ಲಿರುವ ಬಹುಮಹಡಿ ಕಟ್ಟಡ, ಶಾಂತಿನಗರದ ಬಿಎಂಟಿಸಿ ಟರ್ಮಿನಸ್, ಕೋರಮಂಗಲದ ಕೇಂದ್ರೀಯ ಸದನ್, ವಿವಿ ಟವರ್ಸ್, ಆನಂದ್ ರಾವ್ ಸರ್ಕಲ್ ಫ್ಲೈಓವರ್ ಬಳಿ ಸೇರಿದಂತೆ ವಿವಿಧೆಡೆ ಸರ್ಕಾರಿ ಕಚೇರಿಗಳಿವೆ. ಈ ಎಲ್ಲಾ ಸರ್ಕಾರಿ ಕಚೇರಿಗಳನ್ನು ಒಂದೇ ಸ್ಥಳದಲ್ಲಿ ತರಲು 2020 ರಲ್ಲಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವಳಿ ಗೋಪುರ ಪ್ರಸ್ತಾವನೆ ತರಲಾಗಿತ್ತು. ಇದಕ್ಕೆ ಸಚಿವ ಸಂಪುಟವೂ ಅನುಮೋದನೆ ನೀಡಿತ್ತು.

ಇದೀಗ ಯೋಜನೆಗೆ ಜಾಗತಿಕ ಟೆಂಡರ್ ಕರೆಯಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಆನಂದ್ ರಾವ್ ಸರ್ಕಲ್ ಮೇಲ್ಸೇತುವೆ ಬಳಿ 8.5 ಎಕರೆಯಲ್ಲಿ ಅಂದಾಜು 1,250 ಕೋಟಿ ರೂ. ವೆಚ್ಚದಲ್ಲಿ ಕಟ್ಟಡವನ್ನು ಸಮೀಪದ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ರೇಸ್ ಕೋರ್ಸ್ ಮೂಲಕ ವಿಧಾನಸೌಧಕ್ಕೆ ಹೋಗುವ ಮಾರ್ಗದೊಂದಿಗೆ ಸಂಪರ್ಕಿಸುವಂತೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.

ಇದನ್ನು ಪಿಪಿಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, 30 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಪಿಡಬ್ಲ್ಯುಡಿ ಸಚಿವ ಸಿಸಿ ಪಾಟೀಲ್ ಮಾತನಾಡಿ, “ಸಿಎಂ ಬೊಮ್ಮಾಯಿ ಅವರು ಈ ಸಂಬಂಧ ಆಸಕ್ತಿ ತೋರಿದ್ದು, ಯೋಜನೆಗೆ ಒಪ್ಪಿಗೆ ನೀಡಿದ್ದಾರೆ. ಡಿಸೆಂಬರ್ ಅಂತ್ಯ ಅಥವಾ ಜನವರಿಯ ಆರಂಭದಲ್ಲಿ ಜಾಗತಿಕ ಟೆಂಡರ್‌ಗಳನ್ನು ಆಹ್ವಾನಿಸಲಾಗುತ್ತದೆ” ಎಂದು ಹೇಳಿದ್ದಾರೆ.

ಈ ಪ್ರಸ್ತಾವನೆ ಬಹಳ ದಿನಗಳಿಂದ ಬಾಕಿ ಉಳಿದಿತ್ತು. ಆನಂದರಾವ್ ಸರ್ಕಲ್ ಮೇಲ್ಸೇತುವೆಯ ಪಕ್ಕದಲ್ಲಿರುವ ಹಳೆಯ ಕಟ್ಟಡಗಳಿಂದ ನಾವು ಈಗಾಗಲೇ ಆರೋಗ್ಯ ಇಲಾಖೆ ಸೇರಿದಂತೆ ಅಸ್ತಿತ್ವದಲ್ಲಿರುವ ಇತರೆ ವಿಭಾಗಗಳನ್ನು ಸ್ಥಳಾಂತರಿಸಿದ್ದೇವೆ. ಅವಳಿ ಗೋಪುರ ಕಾಮಗಾರಿಯನ್ನು ಪ್ರಾರಂಭಿಸಲು ಅವಕಾಶ ನೀಡಲಾಗಿದೆ. ಮುಂದಿನ ವರ್ಷ ಮಾರ್ಚ್‌ನೊಳಗೆ ಕಾಮಗಾರಿ ಆರಂಭವಾಗುವ ನಿರೀಕ್ಷೆಗಳಿವೆ ಎಂದು ಪಿಡಬ್ಲ್ಯುಡಿ ಮೂಲಗಳು ತಿಳಿಸಿವೆ.

SCROLL FOR NEXT